ಮಂಗಳೂರು:ಪ್ರಥಮ ಬಾರಿಗೆ ಪರ್ಯಾಯ ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಹಾಗೂ ಪ್ರಸ್ತುತ ಪರ್ಯಾಯ ಪೂರ್ವಭಾವಿ ಸಂಚಾರದಲ್ಲಿರುವ ಉಡುಪಿಯ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಜನವರಿ 4 ರಂದು ಸಂಜೆ 4:00 ಗಂಟೆಗೆ ಸರಿಯಾಗಿ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ರಾಜಾಂಗಣದಲ್ಲಿ ಮಂಗಳೂರಿಗೆ ಪುರ ಪ್ರವೇಶ ಮಾಡಲಿರುವರು ಎಂದು ಗೌರವಾಧ್ಯಕ್ಷರಾದ ಡಾ.ಎಂ ಬಿ ಪುರಾಣಿಕ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮಠಾಧೀಶರ ಆಗಮನದ ಈ ಸಂದರ್ಭದಲ್ಲಿ ಪರ್ಯಾಯದ ಮಂಗಳೂರು’ ಸ್ವಾಗತ ಸಮಿತಿಯ ವತಿಯಿಂದ ಹಾಗೂ ಭಕ್ತ ಸಮೂಹದಿಂದ ಉರ್ವಸ್ಟೋರ್ ಶ್ರೀ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಪರಮಪೂಜ್ಯ ಶ್ರೀಪಾದರನ್ನು ಪೂರ್ಣಕುಂಭ ದೊಂದಿಗೆ ಸ್ವಾಗತಿಸಲಾಗುವುದೆಂದು ತಿಳಿಸಿದರು .ಜನವರಿ 4 ಆದಿತ್ಯವಾರದಿಂದ ಜನವರಿ 8 ಗುರುವಾರದ ತನಕ ಪೂಜ್ಯ ಶ್ರೀಪಾದರು ಮಂಗಳೂರಿನ ಭಕ್ತಾದಿಗಳ ಮನೆಗೆ ಭೇಟಿ ಮತ್ತು ಹಲವಾರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರ್ಯಾಯ ರಾಯಸವನ್ನು ಭಕ್ತಾದಿಗಳಿಗೆ ನೀಡಲಿದ್ದಾರೆ ಎಂದರು .
ಜನವರಿ 8 ರ ರುವಾರ ಸಂಜೆ 4 ಗಂಟೆಗೆ ಸರಿಯಾಗಿ ಶರವು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಭವ್ಯವಾದ ಮೆರವಣಿಗೆ ಮೂಲಕ ಬಂದು ಕೊಡಿಯಾಲ್ ಬೈಲ್ ಶಾರದ ವಿದ್ಯಾಲಯದ ಹೊರಾಂಗಣದಲ್ಲಿರುವ ವೇದಿಕೆಯಲ್ಲಿ ಮಂಗಳೂರಿನ ಜನತೆಯ ಪರವಾಗಿ ಪೂಜ್ಯ ಶ್ರೀಪಾದರು ಪೌರ ಸನ್ಮಾನ ಸ್ವೀಕರಿಸಲಿರುವರೆಂದು ತಿಳಿಸಿದರು .ಶೀರೂರು ಶ್ರೀಪಾದರ ನಗರ ಸಂಚಾರ ಸಂದರ್ಭದಲ್ಲಿ ಪಾದಪೂಜೆ ಹಾಗೂ ಗುರುವಂದನೆ ಸಲ್ಲಿಸಲು ಇಚ್ಛಿಸುವ ಭಕ್ತರು ಪರ್ಯಾಯದ ಮಂಗಳೂರು ಸ್ವಾಗತ ಸಮಿತಿಯ ಕಾರ್ಯದರ್ಶಿ ಸುಧಾಕರ್ ರಾವ್ ಪೇಜಾವರ ಮೂ: 9448546051 ಅಥವಾ ಸಂಚಾಲಕರಾದ ಗುರುಪ್ರಸಾದ್ ಕಡಂಬಾರ್ ಮೊ: 9380999424 ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದೆಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ , ಪ್ರಧಾನ ಕಾರ್ಯದರ್ಶಿಗಳಾದ ಸುಧಾಕರ ರಾವ್ ಪೇಜಾವರ , ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕಡಂಬಾರ್ , ಕೋಶಾಧಿಕಾರಿಗಳಾದ ಬಿ ಸುಬ್ರಮಣ್ಯ ರಾವ್ , ಸದಸ್ಯರಾದ ರವೀಂದ್ರ ಶೇಟ್ ಉಪಸ್ಥಿತರಿದ್ದರು .