ಮಂಜೇಶ್ವರ: ಎಡನೀರು ಬಯರಮೂಲೆ ಮಕ್ಕಾಕೋಡನ್ ತರವಾಡ್ನಲ್ಲಿ ಕಳ್ಳರು ಬಾಗಿಲಿನ ಬೀಗ ಒಡೆದು ಒಳನುಗ್ಗಿ ದೈವಕ್ಕೆ ಅರ್ಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ನಗದನ್ನು ಕಳವುಗೈದಿದ್ದಾರೆ.
ಸುಮಾರು 1.70 ಲಕ್ಷ ರೂ. ಮೌಲ್ಯದ ಚಿನ್ನ, 2 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ನಾಣ್ಯಗಳು, ಜೊತೆಗೆ 3,360 ರೂ. ನಗದು ಕಳ್ಳತನವಾಗಿದೆ. ಅಲ್ಲದೆ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಅದರಲ್ಲಿದ್ದ ಹಣವನ್ನೂ ಕಳ್ಳರು ಹೊತ್ತೊಯ್ದಿದ್ದಾರೆ.
ತರವಾಡಿನ ಸದಸ್ಯ ಬಿ. ಬಾಲಕೃಷ್ಣ ಅವರ ದೂರಿನ ಮೇರೆಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಶ್ವಾನದ ಸಹಾಯ ಪಡೆಯಲಾಗಿದೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾದ ಕಳ್ಳರ ಮಾಹಿತಿ ಕೂಡ ಸಂಗ್ರಹಿಸಲಾಗುತ್ತಿದೆ.