ಮಂಜೇಶ್ವರ: ಉಪ್ಪಳ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಶಾರದಾ ನಗರ, ಮಣಿಮುಂಡ ಕಡಪ್ಪುರ, ಹನುಮಾನ್ ನಗರ, ಬಾಂಗ್ಲಾ, ಶಾರದಾ ಮಂದಿರ ಸಮೀಪದ ಪ್ರದೇಶ, ಐಲಾ ಹನುಮಾನ್ ನಗರ ಎಂಬಿಡೆಗಳಲ್ಲಿ ಕಡಲ್ಕೊರೆತ ತೀವೃಗೊಂಡಿದೆ.
ಅದೇ ರೀತಿ ಪೆರಿಂಗಡಿ ಹಾಗೂ ಬೇರಿಕೆ ಗಳಲ್ಲಿ ಕಡಲ್ಕೊರೆತ ತೀವ್ರ ರೀತಿಯಲ್ಲಿ ಮುಂದುವರಿಯುತ್ತಿದ್ದು, ಸುಮಾರು 5ರಷ್ಟು ವಿದ್ಯುತ್ ಕಂಬಗಳು ಸಮುದ್ರ ಪಾಲಾಗಿವೆ. 20ರಷ್ಟು ಕಂಬಗಳು ಇನ್ನೂ ಅಪಾಯದಂಚಿನಲ್ಲಿದೆ. ಈ ಪರಿಸರದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಸುಮಾರು 50ರಷ್ಟು ಮನೆಗಳು ಅಪಾಯದಂಚಿನಲ್ಲಿವೆ. ಈ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವಿಚ್ಛೇದಿಸಲಾಗಿದೆ. ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಪೆರಿಂಗಡಿ ಮುಟ್ಟಂ ಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಸಿ ಪಿ ಎಂ ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ ಆರ್ ಜಯಾನಂದ ಹಾಗೂ ಸಿ ಪಿ ಎಂ ಮಂಜೇಶ್ವರ ಏರಿಯಾ ಸಮಿತಿಯನ್ನೊಳಗೊಂಡ ತಂಡ ಸ್ಥಿತಿಗತಿಗಳನ್ನು ವೀಕ್ಷಿಸಿ ಮೀನುಗಾರಿಕೆ ಹಾಗೂ ಬಂದರು ಸಚಿವ ಸಜಿ ಚೆರಿಯಾನ್ ರವರಿಗೆ ಮನವಿ ಪತ್ರ ಸಲ್ಲಿಸಿದೆ. ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವರು ಬಂದರಿನ ಮುಖ್ಯ ಇಂಜಿನಿಯರ್ ಅನ್ಸಾರಿ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.
ಸಮುದ್ರ ಮಟ್ಟ ಏರಿಕೆಯಿಂದಾಗಿ ಉಪ್ಪಳ ಶಾರದಾ ಹಾಗೂ ಹನುಮಾನ್ ಕಡಪ್ಪುರದಲ್ಲಿ ಶಕುಂತಲಾ ಶಾಲಿಯನ್, ಸುಂದರ, ರವಿ, ಶಶಿಕಲಾ, ನಿವೇದಿತಾ, ಜಯರಾಮ್, ಕೇಶವ ಮುಂತಾದ ಕರಾವಳಿ ಪ್ರದೇಶಗಳಲ್ಲಿನ ಮೀನುಗಾರರ ಮನೆಗಳು ಜಲಾವೃತಗೊಂಡಿವೆ. ಕರಾವಳಿ ನಿವಾಸಿಗಳು ಯಾವಾಗಲೂ ಇಲ್ಲಿ ಅಪಾಯದ ಸ್ಥಿತಿಯನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಮೀನುಗಾರಿಕೆಯ ಕೊರತೆಯಿಂದಾಗಿ ಹಸಿವು, ಕಷ್ಟ ಮತ್ತು ದುಃಖದ ಜೊತೆಗೆ, ಈ ರೀತಿಯ ಭಯಾನಕ ಪರಿಸ್ಥಿತಿ ಅಸ್ತಿತ್ವದಲ್ಲಿದೆ. ಈ ಪ್ರದೇಶಕ್ಕೆ ಆಗಮಿಸುವವರು ಹೃದಯವಿದ್ರಾವಕ ದೃಶ್ಯವನ್ನು ನೋಡಬೇಕಾದ ಪರಿಸ್ಥಿತಿ. ಇಂತಹ ಘಟನೆಗಳು ವರ್ಷಗಳಿಂದ ನಡೆಯುತ್ತಿದ್ದರೂ ಈ ಸಲದ ಮಳೆಯಿಂದ ಕರಾವಳಿ ನಿವಾಸಿಗಳಿಗೆ ನಿದ್ರೆಯಿಲ್ಲದ ಪರಿಸ್ಥಿತಿಯನ್ನು ಸೃಷ್ಟಿಸಿರುವುದಾಗಿ ಕೆ ಆರ್ ಜಯಾನಂದ ಸಚಿವರನ್ನು ಬೇಟಿಯಾದ ಸಂದರ್ಭ ಅವರಿಗೆ ಮನವರಿಕೆ ಮಾಡಿ ಕೊಟ್ಟು ತಕ್ಷಣ ಸ್ಪಂಧಿಸುವಂತೆ ವಿನಂತಿಸಿ ಕೊಂಡಿದ್ದಾರೆ