ಮಂಜೇಶ್ವರ : ಬಾನುವಾರ ರಾತ್ರಿ 12 ಗಂಟೆಯ ಸುಮಾರಿಗೆ ಬದಿಯಡ್ಕ ಸೀತಾಂಗೋಳಿ ಸಮೀಪ ಸ್ಥಳೀಯ ನಿವಾಸಿ ಹಾಗೂ ಮೀನು ವ್ಯಾಪಾರಿ ಅನಿಲ್ ಕುಮಾರ್ (40) ರ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆಗೈಯ್ಯಲೆತ್ನಿಸಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳು ಕುಂಬಳೆ ಪೊಲೀಸ್ ಠಾಣೆಯಲ್ಲಿ ನೇರವಾಗಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ.ಬದಿಯಡ್ಕ ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋಣು, ಅಜಿತ್ ಕುಮಾರ್ ಹಾಗೂ ಹರಿಕೃಷ್ಣ ಬಂಧಿತ ಆರೋಪಿಗಳು.
ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವೃ ಶೋಧ ನಡೆಸುತ್ತಿರುವುದನ್ನು ಅರಿತು ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಆರೋಪಿಗಳಿಗೆ ಎದುರಾದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಆರೋಪಿಗಳು ನೇರವಾಗಿ ಪೊಲೀಸ್ ಠಾಣೆಯಲಿ ಶರಣಾಗಿರುವುದಾಗಿ ತಿಳಿದು ಬಂದಿದೆ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಬೇಳ ಚೌಕಾರಿನ ಅಕ್ಷಯ್ (34) ಎಂಬಾತನನ್ನು ಪೊಲೀಸರು ಈ ಮೊದಲೇ ಬಂಧಿಸಿದ್ದಾರೆ. ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 13 ಮಂದಿ ಆರೋಪಿಗಳಿದ್ದು, ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ