ಮಂಜೇಶ್ವರ:ತಾಯಿಯ ಹಾಲೇ ಮಗುವಿನ ಮೊದಲ ಪ್ರತಿರೋಧಕ ಲಸಿಕೆಯಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತಾಯಿದೂಧ ಪಾನದ ಮಹತ್ವವನ್ನು ಎಲ್ಲರಿಗೂ ತಲುಪಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ” ಎಂದು ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಗಳ್ ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಪೋಷಣ್ ಅಭಿಯಾನ್ ಯೋಜನೆಯ ಆಶ್ರಯದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಾಯಿದೂಧ ಪಾನ ವಾರದ ಪ್ರಾಜೆಕ್ಟ್ ಮಟ್ಟದ ಉದ್ಘಾಟನೆ ಮತ್ತು ಜಾಗೃತಿ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ಲೋಕ್ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕುಂಜತ್ತೂರು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀ ಮೋಹನ್ ರೈ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಮೀಲ ಸಿದ್ದೀಕ್, ಯೋಜನಾ ಸಮಿತಿ ಉಪಾಧ್ಯಕ್ಷ ಶ್ರೀ ಅಸೀಮ್ ಮಣಿಮುಂಡ ಹಾಗೂ ಬ್ಲಾಕ್ ಪಂಚಾಯತ್ ಸದಸ್ಯರಾದ ನಾಗೇಶ್ ಮಂಜೇಶ್ವರ, ಮಿಸ್ರಿಯಾ, ಬೀಪಾತು, ಚಂದ್ರಾವತಿ ಎಂ. ಶೆಟ್ಟಿ, ವಿದ್ಯ ಮತ್ತು ಯೋಜನಾ ಸಮಿತಿ ಸದಸ್ಯರಾದ ಮಜೀದ್ ಪಚ್ಚಂಪಳ, Z.A. ಕೈಯಾರ್ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.

ಮಂಜೇಶ್ವರ ಬ್ಲೋಕ್ ಪಂಚಾಯತ್ ಐ.ಸಿ.ಡಿ.ಎಸ್. (ICDS) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಡಾ. ಸುಚಿತ್ರಾ ಅವರು ತಾಯಿದೂಧ ಪಾನದ ಆರೋಗ್ಯ ಪ್ರಯೋಜನಗಳು ಮತ್ತು ಅದರ ಮಹತ್ವದ ಕುರಿತು ಉಪಯುಕ್ತ ಜಾಗೃತಿ ತರಗತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಒ ಗೀತಕುಮಾರಿ ಸ್ವಾಗತ ಕೋರಿದರು ಮತ್ತು ಬಿಂದು ವಂದನಾರ್ಪಣೆಗೈದರು.

