ಮಂಜೇಶ್ವರ: ಕ್ರಿಯಾ ಸಮಿತಿಯ ಹೋರಾಟಕ್ಕೆ ಮಣಿದು ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಕಾಸರಗೋಡು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಧಿಕೃತವಾಗಿ ಜಾರಿಯಲ್ಲಿದ್ದ ಟೋಲ್ ವಸೂಲಾತಿಯನ್ನು ಕೇಂದ್ರ ಹೆದ್ದಾರಿ ಇಲಾಖೆ ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರ ಪರಿಣಾಮ, ಕರ್ನಾಟಕ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಇತ್ತೀಚೆಗೆ ಜಾರಿಗೊಳಿಸಿದ್ದ ಟಿಕೆಟ್ ದರ ಏರಿಕೆ ಹಿಂಪಡೆಯಲಾಗಿದೆ. ಈ ಕುರಿತು ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ವಿಭಾಗ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಟೋಲ್ ಗೇಟ್ ಆರಂಭವಾದಂದಿನಿಂದ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು, ಸಾರಿಗೆ ಸಂಘಟನೆಗಳು ಹಾಗೂ ಸಾರ್ವಜನಿಕರು ಟೋಲ್ ರದ್ದತಿಗೆ ಒತ್ತಾಯಿಸಿ ಹೋರಾಟ ನಡೆಸಿದ್ದರು. ಈ ಒತ್ತಡದ ಪರಿಣಾಮವಾಗಿ ಕೇಂದ್ರ ಸರ್ಕಾರದ ಅಧೀನದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಟೋಲ್ ಗೇಟ್ ಅನ್ನು ಅನಧಿಕೃತವೆಂದು ಘೋಷಿಸಿ ತೆರವುಗೊಳಿಸಿದೆ
ಜನವರಿ 13ರಂದು ಕುಂಬಳೆ ಆರಿಕ್ಕಾಡಿ ಬಳಿ ಫಾಸ್ಟ್ಟ್ಯಾಗ್ ಮೂಲಕ ಟೋಲ್ ವಸೂಲಿ ಆರಂಭವಾದ ಬಳಿಕ, ದಿನಕ್ಕೆ ಸುಮಾರು 35 ಬಸ್ಗಳಿಗೆ 50 ಸಾವಿರ ರೂಪಾಯಿ ಹೆಚ್ಚುವರಿ ವೆಚ್ಚ ಉಂಟಾಗಿತ್ತು. ಈ ಆರ್ಥಿಕ ಭಾರವನ್ನು ಪ್ರಯಾಣಿಕರ ಮೇಲೆ ಹೊರಿಸುವ ನಿರ್ಧಾರವಾಗಿ ಸಾಮಾನ್ಯ ಬಸ್ಗಳಿಗೆ 7 ರೂ ಮತ್ತು ವೇಗದೂತ ಹಾಗೂ ರಾಜಹಂಸ ಬಸ್ಗಳಿಗೆ 10 ರೂ ಹೆಚ್ಚಿಸಲಾಗಿತ್ತು. ಇದರಿಂದ ಮಂಗಳೂರು–ಕಾಸರಗೋಡು ನಡುವೆ ಪ್ರತಿದಿನ ಸಂಚರಿಸುವ ಅನೇಕ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು