ಮಂಜೇಶ್ವರ : ನಯಬಜಾರ್ನಲ್ಲಿ ಯುವಕನನ್ನು ತಡೆದು ಕೈಯಿಂದ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಐಲ ಕಡಪ್ಪುರ ಶಿವಾಜಿನಗರ ಸಮೀಪದ ಕುದುಪುಳು ನಿವಾಸಿ ಮೊಹಮ್ಮದ್ ಹನೀಫ್ (28) ಎಂಬವರು ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಕೂಟರ್ನಲ್ಲಿ ಸಾಗುತ್ತಿದ್ದ ಹನೀಫ್ ಅವರನ್ನು ನಯಬಜಾರ್ನಲ್ಲಿ ತಡೆದು ಉಪ್ಪಳ ನಿವಾಸಿಗಳಾದ ಕೌಸರ್, ಅಂಬು ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಮನೆ ಸಮೀಪ ಸಮುದ್ರದಿಂದ ಮರಳು ಸಾಗಾಟ ತಡೆದಿದ್ದೇ ಹಲ್ಲೆಗೆ ಕಾರಣವೆಂದು ಹನೀಫ್ ಆರೋಪಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.