ಮಂಗಳೂರು:ನಗರದ ಪ್ರತಿಷ್ಠಿತ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ವತಿಯಿಂದ ಫೆ 23 ರಂದು “ಅಲಿಖಿತ ಆಲೋಚನೆಗಳ ಎಳೆಗಳು ” (Threads of Unwritten Thoughts) ಎಂಬ ಪರಿಕಲ್ಪನೆಯ ಅಡಿಯಲ್ಲಿ ‘TEDxStAloysius’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಸಹಕುಲಪತಿ ರೆ. ಡಾ. ಮೆಲ್ವಿನ್ ಡಿ. ಕುನ್ಹಾ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .
ಸಹ-ಸಂಚಾಲಕಿ ಕು. ಅನಾ ಮಾತನಾಡಿ , 146 ವರ್ಷಗಳ ಶೈಕ್ಷಣಿಕ ಇತಿಹಾಸ ಹೊಂದಿರುವ ಅಲೋಶಿಯಸ್ ಸಂಸ್ಥೆಯು ನವೀನ ಆಲೋಚನೆಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಈ ವೇದಿಕೆ ಕಲ್ಪಿಸುತ್ತಿದೆ. TEDx ವೇದಿಕೆ ಯುವಜನರಿಗೆ ಹೊಸ ಆಲೋಚನೆಗಳು, ಸೃಜನಶೀಲತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಹಂಚಿಕೊಳ್ಳುವ ಮಹತ್ವದ ಅವಕಾಶವಾಗಿದೆ. ಶಿಕ್ಷಣವು ಕೇವಲ ಅಕಾಡೆಮಿಕ್ ಜ್ಞಾನಕ್ಕೆ ಸೀಮಿತವಾಗದೆ ಸಮಾಜದ ಪರಿವರ್ತನೆಗೆ ದಾರಿಯಾಗಬೇಕು ಎಂಬ ದೃಷ್ಟಿಕೋನವನ್ನು TEDx ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಪಿ ಆರ್ ಓ ಚಂದ್ರಕಲಾ ಮಾತನಾಡಿ , ಈ ವರ್ಷದ TEDxStAloysius ಥೀಮ್ “ಅಲಿಖಿತ ಆಲೋಚನೆಗಳ ಎಳೆಗಳು” ಆಗಿದ್ದು, ಮಾನವ ಸೃಜನಶೀಲತೆಯನ್ನು ಮುನ್ನಡೆಸುವ ಕಾಣದ ಕಲ್ಪನೆಗಳು ಹೇಗೆ ಸಮಾಜವನ್ನು ರೂಪಿಸುತ್ತವೆ ಎಂಬುದನ್ನು ಈ ಕಾರ್ಯಕ್ರಮ ಅನಾವರಣಗೊಳಿಸಲಿದೆ ಎಂದು ತಿಳಿಸಿದರು. ವಿಭಿನ್ನ ಕ್ಷೇತ್ರಗಳ ಚಿಂತಕರು ತಮ್ಮ ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ ಎಂದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯಕ್ಕೆ ಹೊಸ ಚಿಂತನೆಗಳ ಪ್ರೇರಣೆಯಾಗಲಿದೆ ಎಂದು ಹೇಳಿದರು. ವಿದ್ಯಾರ್ಥಿ ಸಂಯೋಜಕ ರಯ್ಯನ್ ಜಹಿ ಖಾನ್ TEDxStAloysius ಕಾರ್ಯಕ್ರಮವು ಮಂಗಳೂರಿನ ಸಾಂಸ್ಕೃತಿಕ ಹಾಗೂ ಬೌದ್ಧಿಕ ವೈಶಿಷ್ಟ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ವಿದ್ಯಾರ್ಥಿ ರಯ್ಯನ್ ಜಹಿ ಖಾನ್ ಸಹಿತ ಮತ್ತಿತ್ತರರು ಉಪಸ್ಥಿತರಿದ್ದರು