ಮಂಜೇಶ್ವರ: ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಗಡಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈ ಪಟ್ಟಿಯಲ್ಲಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅವರ ಹೆಸರು ಕಾಸರಗೋಡು ಕ್ಷೇತ್ರಕ್ಕೆ ಕೇಳಿಬರುತ್ತಿದ್ದರೆ, ಮಂಜೇಶ್ವರದಲ್ಲಿ ಕೆ. ಸುರೇಂದ್ರನ್ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಕಳೆದ ಎರಡು ಚುನಾವಣೆಗಳಲ್ಲಿ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಕೈತಪ್ಪಿದ್ದ ಮಂಜೇಶ್ವರವನ್ನು ಈ ಬಾರಿ ಹೇಗಾದರೂ ಮಾಡಿ ವಶಪಡಿಸಿಕೊಳ್ಳಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. 2016ರಲ್ಲಿ ಕೇವಲ 89 ಮತಗಳ ಅಂತರದ ಹಿನ್ನಡೆ ಅನುಭವಿಸಿದ್ದ ಸುರೇಂದ್ರನ್ ಅವರ ಜನಪ್ರಿಯತೆಯ ಮೇಲೆ ಪಕ್ಷ ಅಪಾರ ವಿಶ್ವಾಸ ಇರಿಸಿದೆ.
ಇನ್ನೊಂದೆಡೆ, ಯುಡಿಎಫ್ ಪರವಾಗಿ ಹಾಲಿ ಶಾಸಕ ಎ.ಕೆ.ಎಂ. ಅಶ್ರಫ್ ಅವರೇ ಕಣಕ್ಕಿಳಿಯುವ ಸಾಧ್ಯತೆಯಿದೆ. ಎಲ್ಡಿಎಫ್ ಪಾಳಯದಲ್ಲಿ ಉದುಮದ ಶಾಸಕ ಸಿ.ಎಚ್. ಕುಂಞಂಬು ಅವರ ಹೆಸರನ್ನು ಮಂಜೇಶ್ವರಕ್ಕೆ ಪರಿಗಣಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆಯಾಗಿ ಮಂಜೇಶ್ವರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ದಟ್ಟವಾಗಿವೆ.