ಕಾಸರಗೋಡು: ಒಬ್ಬ ಸಾರ್ವಜನಿಕ ಕಾರ್ಯಕರ್ತನು ರಾಜಕೀಯ ಮತ್ತು ವ್ಯವಹಾರವನ್ನು ಸಮನ್ವಯಗೊಳಿಸಿ ಮುಂದುವರಿಯುವುದು ಸಾಮಾನ್ಯ. ಆದರೆ ಸಾರ್ವಜನಿಕ ಸೇವೆ, ವ್ಯವಹಾರ, ಬರವಣಿಗೆ ಮತ್ತು ಓದು – ಈ ಎಲ್ಲವೂ ಒಬ್ಬ ವ್ಯಕ್ತಿಯಲ್ಲಿ ಒಂದೇ ವೇಳೆ ಒಂದಾಗುವುದು ಅಪರೂಪ. ಅಂತಹ ಮಾದರಿ ವ್ಯಕ್ತಿತ್ವವೇ ಮುಸ್ಲಿಂ ಲೀಗ್ ನಾಯಕ ಹಾಗೂ ಸಾರ್ವಜನಿಕ ಕಾರ್ಯಕರ್ತ ಇಬ್ರಾಹೀಂ ಮುಂಡ್ಯತ್ತಡ್ಕ .
ವಿದ್ಯಾರ್ಥಿ ದಶೆಯಿಂದಲೇ ಪತ್ರಿಕೆಗಳು, ಮಾಸಪತ್ರಿಕೆಗಳು ಹಾಗೂ ವಿವಿಧ ಆನೂಕಾಲಿಕಗಳಲ್ಲಿ ಬರೆಯಲು ಆರಂಭಿಸಿದ್ದ ಅವರು, ಮಧ್ಯದಲ್ಲಿ ವಿದೇಶ ಪ್ರವಾಸಿಯಾಗಿದ್ದರೂ ನಂತರ ಸ್ವದೇಶಕ್ಕೆ ಮರಳಿ ವ್ಯವಹಾರ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇದರ ನಡುವೆ ಬರವಣಿಗೆ ಮತ್ತು ಓದಿಗೆ ಸಮಯ ಮೀಸಲಿಡುತ್ತಿರುವುದು ಅವರನ್ನು ಇತರರಿಂದ ವಿಭಿನ್ನರನ್ನಾಗಿ ಮಾಡುತ್ತದೆ.
ಆನೂಕಾಲಿಕ ವಿಷಯಗಳ ಮೇಲೆ ಸುಮಾರು ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವುದಾಗಿ ಇಬ್ರಾಹೀಂ ತಿಳಿಸಿದ್ದಾರೆ. “ಜನಪ್ರತಿನಿಧಿ” ಎಂಬ ಕೃತಿ ರಚನೆಗೆ ಹೆಚ್ಚು ಸಮಯ ಹಾಗೂ ಪರಿಶ್ರಮ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಪ್ರಸ್ತುತ “ತುಳುನಾಡಿನ ನಾಯಕರು” ಎಂಬ ಕೃತಿಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಂಚಾಯತ್ ಸದಸ್ಯರಿಂದ ಹಿಡಿದು ಭಾರತದ ಪ್ರಧಾನ ಮಂತ್ರಿವರೆಗೆ ಎಲ್ಲರಿಗೂ ಉಪಯುಕ್ತವಾಗುವಂತೆ “ಜನಪ್ರತಿನಿಧಿ” ಕೃತಿಯನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಒಬ್ಬ ಜನಪ್ರತಿನಿಧಿ “ಹೇಗಿರಬೇಕು, ಹೇಗಿರಬಾರದು” ಎಂಬುದೇ ಇದರ ಮುಖ್ಯ ವಿಷಯವಾಗಿದೆ. ಆ ಸಮಯದ ಕಾನೂನು ಇಲಾಖೆಯ ಕಾರ್ಯದರ್ಶಿ ಹರೀಂದ್ರನಾಥ್ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ತಮರ್ ಫೌಂಡೇಶನ್ ಎಂಬ ಸ್ವಯಂಸೇವಾ ಸಂಸ್ಥೆಯ ಆಶ್ರಯದಲ್ಲಿ ಅವರ ಎಲ್ಲಾ ಕೃತಿಗಳು ಪ್ರಕಟಗೊಂಡಿವೆ.
ತಮ್ಮ ಕೃತಿಗಳು ಹೊಸ ತಲೆಮಾರಿಗೆ ಪ್ರೇರಣೆಯಾಗಲಿ ಎಂಬುದು ಇಬ್ರಾಹೀಂ ಅವರ ಆಶಯ. ತಮ್ಮ ಮನೆಯನ್ನು ಸ್ವಂತ ಗ್ರಂಥಾಲಯವನ್ನಾಗಿಸಿಕೊಂಡಿರುವ ಅವರಿಗೆ ಬರವಣಿಗೆ ಮತ್ತು ಓದಿನ ಮಾರ್ಗದಲ್ಲೇ ಸಾಗುವುದು ಅತ್ಯಂತ ಇಷ್ಟ.
ಅವರು ಸಮಸ್ತ ಕೇರಳ ಸುನ್ನಿ ಬಾಲವೇದಿ ರಾಜ್ಯ ಸಮಿತಿ ಕಾರ್ಯದರ್ಶಿ, ಎಸ್ಎಂಎಫ್ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಕಾರ್ಯದರ್ಶಿ, ಮಂಜೇಶ್ವರಂ ಕ್ಷೇತ್ರ ಮುಸ್ಲಿಂ ಲೀಗ್ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಿಲ್ಲಾ ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ಅವರ ಪ್ರಮುಖ ಕೃತಿಗಳಲ್ಲಿ “ಜನಪ್ರತಿನಿಧಿ”, “ನಿಲಪಾಡು”, “ನಿರ್ಭಯಂ”, “ಮಹಲ್ಲ್ ಜಮಾಅತ್ ಸಂಘಬೋಧಂ”, “ಎಸ್ಎಂಎಫ್ ಲಘು ಪರಿಚಯಂ”, “ವಕ್ಫ್ ಕಾನೂನು ಮತ್ತು ವಕ್ಫ್ ಸಂರಕ್ಷಣೆ”, “ಸಾಮಾಜಿಕ ಸೇವೆ ಕಡ್ಡಾಯವಾದಾಗ”, “ಶಿಕ್ಷಣ ವಾಣಿಜ್ಯೀಕರಣವಾಗುವಾಗ”, “ಮಹಿಳಾರತ್ನಗಳು”, “ವಿಶುದ್ಧ ಭೂಮಿಯ ಮೂಲಕ ಒಂದು ತೀರ್ಥಯಾತ್ರೆ”, “ಸ್ಮರಣೀಯ ವ್ಯಕ್ತಿತ್ವಗಳು” ಮುಂತಾದವುಗಳು ಪ್ರಮುಖವಾಗಿವೆ.