ಮಂಜೇಶ್ವರ: ಸೂರ್ಯನ ಬೆಳಕು ಸಾಲದೋ ಏನೋ ಎಂಬಂತೆ ಮಂಗಲ್ಪಾಡಿ ಪಂಚಾಯತ್ ತನ್ನ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೂ ಬೀದಿ ದೀಪಗಳನ್ನು ಉರಿಸಿ ‘ಹೊಸ ಇತಿಹಾಸ’ ಬರೆಯುತ್ತಿದೆ.ಪೆರಿಂಗಡಿ ರಸ್ತೆಯ ಜನಪ್ರಿಯ ಸರ್ವೀಸ್ ರಸ್ತೆ ಹಾಗೂ ಕುಬಣೂರು ಪುಳಿಕುತ್ತಿ ಸ್ಮಶಾನದ ಬಳಿಯ ಹೈಮಾಸ್ಟ್ ದೀಪಗಳು ಕಳೆದ ಒಂದು ತಿಂಗಳಿನಿಂದ ವಿರಾಮವಿಲ್ಲದೆ ರಾತ್ರಿ-ಹಗಲು ಸತತವಾಗಿ ಉರಿಯುತ್ತಿವೆ.
ಬಹುಶಃ ಪಂಚಾಯತ್ಗೆ ಹಗಲು ಹೊತ್ತಿನ ಕತ್ತಲೆಯನ್ನು ಓಡಿಸುವ ಅತೀಂದ್ರಿಯ ಶಕ್ತಿ ಬಂದಿರಬೇಕು ಅಥವಾ ಕೆಎಸ್ಇಬಿ ಬಿಲ್ ಹೆಚ್ಚಾದಷ್ಟೂ ಪಂಚಾಯತ್ ಖಜಾನೆ ತುಂಬುತ್ತದೆ ಎಂಬ ನಂಬಿಕೆ ಇರಬಹುದು.
ಸಾರ್ವಜನಿಕರ ತೆರಿಗೆ ಹಣ ವಿದ್ಯುತ್ ರೂಪದಲ್ಲಿ ವ್ಯರ್ಥವಾಗುತ್ತಿದ್ದರೂ, ದೀಪ ನಂದಿಸುವ ಕನಿಷ್ಠ ಜ್ಞಾನವಿಲ್ಲದ ವ್ಯವಸ್ಥೆಯನ್ನು ಕಂಡು ಜನ ನಗಬೇಕೋ ಅಳಬೇಕೋ ಎಂದು ತಿಳಿಯುತ್ತಿಲ್ಲ. ಸೂರ್ಯನ ಪ್ರಖರತೆಗೆ ಸ್ಪರ್ಧೆ ನೀಡುವ ಈ ದೀಪಗಳನ್ನು ಕಂಡು ಸಾರ್ವಜನಿಕರು, “ರಾತ್ರಿ ದೀಪ ಉರಿಸದಿದ್ದರೂ ಪರವಾಗಿಲ್ಲ, ದಯವಿಟ್ಟು ಈ ಹಗಲು ಪ್ರದರ್ಶನ ನಿಲ್ಲಿಸಿ” ಎಂದು ಕೈಮುಗಿಯುತ್ತಿದ್ದಾರೆ. ಅಧಿಕಾರಿಗಳ ನಿದ್ದೆ ಎಂದು ಮುಗಿಯುವುದೋ, ಈ ದೀಪಗಳು ಎಂದು ಆರುವುದೋ ದೇವರಿಗೇ ಗೊತ್ತು.