ಕಡಬ : ಬಾವಿ ತೋಡಲು ಸ್ಪೋಟಕ ಬಳಕೆ, ಸಮೀಪದ ಮನೆಗಳಿಗೆ ಹಾನಿ -ದೂರು

ರಾಮಕುಂಜ : ಬಾವಿ ತೋಡುವ ಸಂದರ್ಭದಲ್ಲಿ ಸ್ಪೋಟಕ ಬಳಕೆ ಮಾಡಿರುವುದರಿಂದ ಸಮೀಪದ ಮನೆಗಳಿಗೆ ಹಾನಿಯಾಗಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮಾ.8 ರಂದು ನಡೆದಿದೆ. ಈ ಮಧ್ಯೆ ಸ್ಪೋಟವಾಗದೆ ಬಾವಿಯೊಳಗೆ ಉಳಿದಿರುವ ಮದ್ದುಗುಂಡುಗಳನ್ನು ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ತೆರವುಗೊಳಿಸುವ ಕಾರ್ಯಾಚರಣೆ ಮಾ. 10 ರಂದು ಬೆಳಿಗ್ಗೆ ಆರಂಭಿಸಿದ್ದಾರೆ.

ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮೈಸೂರು ನಿವಾಸಿ ಸೋಮಶೇಖರ ಎಂಬವರು ತಮ್ಮ ಸಂಬಂಧಿಕರಿಂದ 23 ಸೆಂಟ್ಸ್ ಜಾಗ ಖರೀದಿಸಿದ್ದು ಅದರಲ್ಲಿ ಅಡಿಕೆ ಮರಗಳಿವೆ. ಈ ಜಾಗದಲ್ಲಿ ನೀರಿಗಾಗಿ ಬಾವಿ ತೋಡಿದ್ದು ಸುಮಾರು 15 ಅಡಿ ಆಳದಲ್ಲಿ ಕಲ್ಲು ಸಿಕ್ಕಿದ ಹಿನ್ನೆಲೆಯಲ್ಲಿ ಸ್ಪೋಟಕ ಬಳಸಿ ತೋಡಲು ಮುಂದಾಗಿದ್ದಾರೆ. ಅದರಂತೆ ಮಾ. 8ರಂದು ಸ್ಪೋಟಕ ಸಿಡಿಸಿದ್ದು ಇದರಿಂದ ಸಮೀಪದ ವಾಮನ ಮೂಲ್ಯ, ಕೆ.ಟಿ.ಮೋಹನ ಎಂಬವರ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಅದೇ ದಿನ ಸ್ಥಳಕ್ಕೆ ಆಗಮಿಸಿದ ಕಡಬ ಠಾಣೆ ಸಬ್ ಇನ್ಸಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಾಂಬ್ ನಿಷ್ಕ್ರಿಯ ದಳ. ಎಫ್ ಎಸ್ ಎಲ್ ಟೀಮ್ ಆಗಮನ:
ಈ ಮಧ್ಯೆ ಬಾವಿಯೊಳಗೆ ಸ್ಪೋಟವಾಗದೆ ಉಳಿದುಕೊಂಡಿದ್ದ ಮದ್ದು ಗುಂಡು ತೆರವುಗೊಳಿಸಲು ಮಾ. 10 ರಂದು ಬೆಳಿಗ್ಗೆ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ಆರಂಭಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಕಡಬ ಎಸ್ ಐ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು , ಎಫ್ ಎಸ್ ಎಲ್ ಟೀಮ್ ನವರು ಉಪಸ್ಥಿತರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!