ಮಂಜೇಶ್ವರ: ಹೊಸಂಗಡಿ ಪೇಟೆಯ ಅಸ್ಮಿತೆಯಂತಿದ್ದ, ಹಿರಿಯ ಹೋಟೆಲ್ ಉದ್ಯಮಿ ಮತ್ತು ಸಾಮಾಜಿಕ ಹೋರಾಟಗಾರ ಬಿ. ಎಂ. ಮಾಧವ ಸಂಗಮ್ (74) ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನದೊಂದಿಗೆ ಮಂಜೇಶ್ವರದ ಒಂದು ಸುದೀರ್ಘ ಸಾಮಾಜಿಕ ಪರ್ವ ಅಂತ್ಯಗೊಂಡಂತಾಗಿದೆ.ಕೇವಲ ಹೋಟೆಲ್ ಆಗಿರಲಿಲ್ಲ ‘ಸಂಗಮ್’
ಬಿ. ಎಂ. ನಾರಾಯಣ ಅವರಿಂದ ಬಳುವಳಿಯಾಗಿ ಬಂದ ‘ಸಂಗಮ್ ಹೋಟೆಲ್’ ಅನ್ನು ಮಾಧವ ಅವರು ಕೇವಲ ಒಂದು ಉಪಾಹಾರ ಗೃಹವಾಗಿ ಉಳಿಸಲಿಲ್ಲ. ಅದು ನಾಡಿನ ಹಿರಿಯರು, ಕಿರಿಯರು ಒಟ್ಟಾಗಿ ಕುಳಿತು ಚರ್ಚಿಸುವ, ಸಾಮಾಜಿಕ ವಿಷಯಗಳ ಬಗ್ಗೆ ಸಂವಾದ ನಡೆಸುವ ‘ಸಂವಾದ ಕೇಂದ್ರ’ವಾಗಿ ಮಾರ್ಪಟ್ಟಿತ್ತು. ನಾಡಿನ ಜನರೊಂದಿಗಿನ ಅವರ ಒಲುಮೆ ಮತ್ತು ಪ್ರೀತಿಯೇ ಈ ಹೋಟೆಲ್ ಅನ್ನು ಜನಪ್ರಿಯತೆಯ ಶಿಖರಕ್ಕೇರಿಸಿತ್ತು.
ನಿರಪೇಕ್ಷಿತ ಸಮಾಜ ಸೇವೆ:
ಯಾವುದೇ ಅಧಿಕಾರ ಅಥವಾ ಸ್ಥಾನಮಾನದ ಹಪಹಪಿಯಿಲ್ಲದೆ ಸದ್ದಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಾಧವ ಅವರು, ಕೊಟ್ಟಗಂ ಬಂಗೇರ ತರವಾಡಿನ ಗೌರವ ಸಲಹೆಗಾರರಾಗಿ, ರಾಮತ್ತಮಜಲ್ ರುದ್ರಭೂಮಿ ಅಭಿವೃದ್ಧಿ ಹಾಗೂ ಕನಿಲ ಭಗವತಿ ಕ್ಷೇತ್ರದ ಪುನರುತ್ಥಾನ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು. ಸಿಪಿಐಎಂ ಮಂಜೇಶ್ವರ ಲೋಕಲ್ ಕಮಿಟಿಯ ಹಿರಿಯ ಸದಸ್ಯರಾಗಿಯೂ ಅವರು ಸಕ್ರಿಯರಾಗಿದ್ದರು.
ತನ್ನ ಸರಳ ವ್ಯಕ್ತಿತ್ವ ಮತ್ತು ಬಹುಮುಖಿ ಕಾರ್ಯಾಸಕ್ತಿಯ ಮೂಲಕ ಹೊಸಂಗಡಿಯ ಮನೆಮಾತಾಗಿದ್ದ ಮಾಧವ ಅವರ ನಿಧನಕ್ಕೆ ನಾಡಿನ ಗಣ್ಯರು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ಸೂಚಿಸಿದ್ದಾರೆ.