ಕೇರಳದಲ್ಲಿ ಮೂರನೇ ಪರ್ಯಾಯಕ್ಕೆ ಮನ್ನಣೆ: ವಿ.ಕೆ. ಸಜೀವನ್

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿ ಮೂರನೇ ಪರ್ಯಾಯಕ್ಕೆ ಸಿಕ್ಕ ಮನ್ನಣೆಯನ್ನು ಸೂಚಿಸುತ್ತದೆ ಎಂದು ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ಹಾಗೂ ಕೋಝಿಕ್ಕೋಡ್ ಮೇಘಲಾ ಪ್ರಭಾರಿ ವಿ.ಕೆ. ಸಜೀವನ್ ಹೇಳಿದ್ದಾರೆ. ಡಾ. ಶ್ಯಾಮಪ್ರಸಾದ್ ಮುಖರ್ಜಿ ಭವನದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇರಳದಲ್ಲಿ 30 ಲಕ್ಷ ಮತಗಳು ಮತ್ತು ಮೂವರು ಶಾಸಕರು ಲಭಿಸಿರುವುದು ಜನತೆ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿರುವುದಕ್ಕೆ ಪುರಾವೆಯಾಗಿದೆ. ಈ ಯಶಸ್ಸು ಬಿಜೆಪಿ ಮುನ್ನಡೆಸುತ್ತಿರುವ ಅಭಿವೃದ್ಧಿ ರಾಜಕಾರಣಕ್ಕೆ ಸಿಕ್ಕ ಮನ್ನಣೆಯೂ ಹೌದು. ಭವಿಷ್ಯದಲ್ಲಿ ಚುನಾವಣಾ ಹೋರಾಟವು ಎನ್‌ಡಿಎ ಮೈತ್ರಿಕೂಟ ಮತ್ತು ಇಂಡಿ ಮೈತ್ರಿಕೂಟದ ನಡುವೆ ಮಾತ್ರ ಇರಲಿದೆ. ಕೇರಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಜನ ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ಬೂತ್ ಮಟ್ಟದ ಚಟುವಟಿಕೆಗಳನ್ನು ತಕ್ಷಣವೇ ಆರಂಭಿಸಬೇಕು ಎಂದು ವಿ.ಕೆ. ಸಜೀವನ್ ಕರೆ ನೀಡಿದರು.

ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಕೋಝಿಕ್ಕೋಡ್ ಮೇಘಲಾ ಸಂಘಟನಾ ಕಾರ್ಯದರ್ಶಿ ಜಿ. ಕಾಶೀನಾಥ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ. ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಸವಿತಾ ಟೀಚರ್, ಎ. ವೇಲಾಯುಧನ್, ರಾಮಪ್ಪ ಮಂಜೇಶ್ವರಂ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್ ಮತ್ತು ಮನುಲಾಲ್ ಮೇಲತ್ ಮಾತನಾಡಿದರು.

ಕನ್ನಡ ಭಾಷೆಯ ಮೇಲಿನ ನಿರ್ಲಕ್ಷ್ಯವನ್ನು ಕೊನೆಗಾಣಿಸಬೇಕು, ಪರಿಸರ ಮಾಲಿನ್ಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು, ಸರ್ಕಾರಿ ವೈದ್ಯಕೀಯ ಕಾಲೇಜನ್ನು ತಕ್ಷಣವೇ ಕಾರ್ಯಾರಂಭ ಮಾಡಬೇಕು ಹಾಗೂ ಮಾದಕ ದ್ರವ್ಯ ವಿರೋಧಿ ಚಟುವಟಿಕೆಗಳನ್ನು ಬಲಪಡಿಸಬೇಕು ಎಂದು ಸಭೆಯಲ್ಲಿ ನಿರ್ಣಯಗಳ ಮೂಲಕ ಆಗ್ರಹಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!