ಮಂಜೇಶ್ವರ: ಅನಧಿಕೃತ ಮರಳು ಸಾಗಾಟ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕುಂಬಳೆ ಪೊಲೀಸರು ಯುದ್ಧ ಘೋಷಿಸಿದ್ದು, ಕಠಿಣ ‘ಕಾಪಾ’ ಕಾಯ್ದೆಯಡಿ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಪಾಚಾಣಿ, ಉಳುವಾರು ಸೇರಿದಂತೆ ವಿವಿಧ ಹೊಳೆಗಳಿಂದ ಅವಿರತವಾಗಿ ನಡೆಯುತ್ತಿರುವ ಮರಳು ಲೂಟಿಯನ್ನು ತಡೆಯಲು ಇನ್ಸ್ಪೆಕ್ಟರ್ ಬೈಜು ಕೆ. ಥೋಮಸ್ ನೇತೃತ್ವದ ತಂಡ ಈ ಮುನ್ನೆಚ್ಚರಿಕೆ ನೀಡಿದೆ.
ದಂಧೆಕೋರರನ್ನು ಕೇವಲ ಬಂಧಿಸುವುದಷ್ಟೇ ಅಲ್ಲದೆ, ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು. ಒಂದು ವೇಳೆ ಗಡಿಪಾರು ಆದೇಶ ಉಲ್ಲಂಘಿಸಿದರೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮರಳು ಸಾಗಾಟಕ್ಕೆ ರಸ್ತೆ ಅಥವಾ ದೋಣಿ ಸೌಕರ್ಯ ಒದಗಿಸುವವರ ಮೇಲೂ ಕಳವು ಪ್ರಕರಣ ದಾಖಲಿಸಲಾಗುವುದು.
ಈಗಾಗಲೇ ಹಲವಾರು ದೋಣಿಗಳನ್ನು ನಾಶಪಡಿಸಲಾಗಿದ್ದು, ಇನ್ನು ಮುಂದೆ ತಪ್ಪಿಸಿಕೊಳ್ಳುವ ಆರೋಪಿಗಳ ವಿರುದ್ಧ ರಾಜಿರಹಿತ ಕಾನೂನು ಸಮರ ಮುಂದುವರಿಯಲಿದೆ ಎಂದು ಪೊಲೀಸರು ಗುಡುಗಿದ್ದಾರೆ.