ಇತ್ತೀಚಿನ ದಿನಗಳಲ್ಲಿ ಕೊರಳಲ್ಲೊಂದು ಮೈಕು, ಕೈಯಲ್ಲೊಂದು ಕ್ಯಾಮರಾ ತೂಗಾಡಿಸಿಕೊಂಡರೆ ಸಾಕು; ಯಾರೂ ಬೇಕಾದರೂ ‘ಸ್ವಯಂ ಘೋಷಿತ ಪತ್ರಕರ್ತ’ರ ಪಟ್ಟಕ್ಕೇರಬಹುದು ಎಂಬಂತಾಗಿದೆ. ಆದರೆ, ಈ ತಾಂತ್ರಿಕ ಉಪಕರಣಗಳ ಹಿಂದೆ ಅಡಗಿರುವ ‘ಆಯ್ದುಕೊಳ್ಳುವ’ (Selective) ಕುಟಿಲ ಬುದ್ಧಿ ಇದೆಯಲ್ಲ, ಅದು ಸಮಾಜದ ಸ್ವಾಸ್ಥ್ಯಕ್ಕೆ ನಿಜಕ್ಕೂ ಅಪಾಯಕಾರಿ. ಸಾಧಕರನ್ನು ಸಂದರ್ಶಿಸುವ ನೆಪದಲ್ಲಿ ತಮಗೆ ಬೇಕಾದವರನ್ನು ಮಾತ್ರ ವೈಭವೀಕರಿಸುವುದು ಮತ್ತು ಅಕಾಡೆಮಿಗಳ ಪವಿತ್ರ ಆವರಣದಲ್ಲಿ ಕೇವಲ ಲಾಭದ ಆಸೆಯೊಂದಿಗೆ ಮೂಗು ತೂರಿಸುವುದು ಇಂದಿನ ಸಾಂಸ್ಕೃತಿಕ ಲೋಕದ ಅತಿ ದೊಡ್ಡ ವಿಪರ್ಯಾಸ.
1. ಅಸ್ಮಿತೆಯ ಹೆಸರಲ್ಲಿ ವ್ಯಾಪಾರೀ ಮನಸ್ಥಿತಿ
ಗಡಿನಾಡಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭಾಷೆ ಎನ್ನುವುದು ಕೇವಲ ಸಂವಹನದ ಮಾಧ್ಯಮವಲ್ಲ; ಅದೊಂದು ಅಪ್ಪಟ ಭಾವನೆ ಮತ್ತು ಉಸಿರಾಡುವ ಅಸ್ಮಿತೆ. ಆದರೆ, ವಿಷಾದದ ಸಂಗತಿಯೆಂದರೆ ಇಂದಿನ ಈ ನಕಲಿ ವೇಷಧಾರಿಗಳು ಭಾಷೆಯನ್ನೇ ಸರಕಾಗಿಸಿಕೊಂಡು ಹಣ ಮಾಡಲು ಹೊರಟಿದ್ದಾರೆ. ಭಾಷಾ ಪ್ರೇಮದ ಮುಖವಾಡದ ಅಡಿಯಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕುವ ಇವರ ಬದುಕು ಕೇವಲ ವ್ಯಾಪಾರೀ ಮನಸ್ಥಿತಿಯ ವಿರೂಪ ಪ್ರದರ್ಶನವಷ್ಟೇ.
”ಮನೆಗೆ ಬೆಂಕಿ ಬಿದ್ದಾಗ ಆ ಉರಿಯಲ್ಲೂ ಚಳಿ ಕಾಯಿಸಿಕೊಳ್ಳುವ ಜಾಯಮಾನ ಇವರದ್ದು.” ಬೇರೆಯವರ ಸಂಕಟ ಅಥವಾ ಸಾಮಾಜಿಕ ಅಸ್ಥಿರತೆಯಲ್ಲೂ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವ ಕಲೆ ಇವರಿಗೆ ಅತೀವವಾಗಿ ಕರಗತವಾಗಿದೆ.
2. ಪ್ರಚಾರದ ಹಪಾಹಪಿ ಮತ್ತು ‘ಲೆಕ್ಕಾಚಾರದ’ ಉದಾಸೀನತೆ
ಜಾತ್ರೆ, ಬಯಲಾಟ, ಅಬ್ಬರದ ಉತ್ಸವಗಳೆಂದರೆ ಇವರಿಗೆ ಎಲ್ಲಿಲ್ಲದ ಸಂಭ್ರಮ. ಅಲ್ಲಿ ಕ್ಯಾಮರಾ ಹಿಡಿದು ಅಬ್ಬರಿಸುವುದು ಕೇವಲ ಪ್ರಚಾರಕ್ಕಾಗಿ ಮತ್ತು ವೈಯಕ್ತಿಕ ಪ್ರತಿಷ್ಠೆಗಾಗಿ. ಆದರೆ, ಅದೇ ಮಣ್ಣಿನ ಒಬ್ಬ ಸಾತ್ವಿಕ ಸಾಧಕನ ಗ್ರಂಥ ಬಿಡುಗಡೆಯಂತಹ ಜ್ಞಾನದ ಕಾರ್ಯಕ್ರಮಕ್ಕೆ ಇವರು ಬರುವ ರೀತಿಯೇ ವಿಚಿತ್ರ!
ಅಲ್ಲಿ ಹಣದ ಹೊಳೆಯಿಲ್ಲ, ಅಬ್ಬರದ ಪ್ರಚಾರವಿಲ್ಲ ಎಂದು ತಿಳಿಯುತ್ತಿದ್ದಂತೆಯೇ ಇವರು ಬದಲಾಗಿಬಿಡುತ್ತಾರೆ. ಅಂತಹ ಪವಿತ್ರ ಕಾರ್ಯಕ್ರಮಕ್ಕೆ ಹತ್ತರಲ್ಲಿ ಹನ್ನೊಂದಾಗಿ ಬಂದು ನಿಲ್ಲುವ ಇವರು, ಅಂದು ಮಾತ್ರ ಕ್ಯಾಮರಾ ಹೊರತೆಗೆಯುವ ಗೋಜಿಗೆ ಹೋಗುವುದಿಲ್ಲ. “ತಾನಾಯಿತು, ತನ್ನ ಪಾಡಾಯಿತು” ಎಂಬಂತೆ ಮೌನವಾಗಿ ಮೂಲೆಯಲ್ಲಿ ಕುಳಿತುಕೊಳ್ಳುವ ಇವರ ಈ ವರ್ತನೆ ವಿನಯವಲ್ಲ; ಬದಲಾಗಿ ಅದು “ಹಣವಿಲ್ಲದ ಕಾರ್ಯಕ್ರಮ ನನ್ನದಲ್ಲ” ಎಂಬ ಅಪ್ಪಟ ವ್ಯಾಪಾರೀ ಲೆಕ್ಕಾಚಾರ ಮತ್ತು “ನನ್ನ ಕ್ಯಾಮರಾಗೆ ಇಲ್ಲಿ ಬೆಲೆಯಿಲ್ಲವೇ?” ಎಂಬ ಅಹಂಕಾರದ ಪ್ರದರ್ಶನ. ಜ್ಞಾನ ಮತ್ತು ಗೌರವದ ನಿಗರ್ವಿ ಹಂಚಿಕೆಯಾಗುವಲ್ಲಿ ಇವರು ಕೇವಲ ಪ್ರೇಕ್ಷಕರಂತೆ ನಟಿಸುವುದು ಇವರ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕನ್ನಡಿ
3. ಜಾಣತನದ ಮುಖವಾಡಕ್ಕೆ ಕಾಲವೇ ಉತ್ತರ
”ಬದುಕುವುದಾದರೆ ನಿನ್ನನ್ನೇ ನೋಡಿ ಕಲಿಯಬೇಕು” ಎನ್ನುವ ಮಾತು ಇಲ್ಲಿ ಅಭಿಮಾನದ ನುಡಿಯಲ್ಲ; ಬದಲಾಗಿ ಅದು ಅಪ್ಪಟ ವ್ಯಂಗ್ಯದ ಚಾಟಿ ಏಟು. ನೈತಿಕತೆಯನ್ನು ಗಾಳಿಗೆ ತೂರಿ, ಸ್ವಾರ್ಥವನ್ನೇ ಬಂಡವಾಳವಾಗಿಸಿಕೊಂಡು ಬದುಕುವ ‘ಜಾಣತನ’ ಇವರಿಗೆ ಸಿದ್ಧಿಸಿದೆ. ಇಂತಹವರ ಜೊತೆ ವಾದಕ್ಕಿಳಿದು ನಮ್ಮ ಚೈತನ್ಯವನ್ನು ವ್ಯರ್ಥ ಮಾಡುವುದಕ್ಕಿಂತ, ಅವರ ಈ ಎಲ್ಲಾ ಕೃತ್ಯಗಳನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸಿ ಮೌನವಾಗಿರುವುದೇ ಶ್ರೇಷ್ಠ.
ಸಂಸ್ಕೃತಿಯ ಹೆಸರಿನಲ್ಲಿ ವ್ಯಾಪಾರಕ್ಕಿಳಿದವರಿಗೆ ನಾವು ನೀಡಬಹುದಾದ ಅತ್ಯಂತ ತೀಕ್ಷ್ಣವಾದ ಮತ್ತು ಘನತೆಯುಳ್ಳ ಪ್ರತಿಕ್ರಿಯೆಯೇ ಈ ‘ಧೀಮಂತ ಮೌನ’. ಸಂಸ್ಕಾರವಿಲ್ಲದ ಈ ಶೋಕಿ ಪತ್ರಕರ್ತರಿಗೆ ಕಾಲವೇ ತನ್ನದೇ ಶೈಲಿಯಲ್ಲಿ ಮುಂದೊಂದು ದಿನ ತಕ್ಕ ಉತ್ತರ ನೀಡಲಿದೆ.
✍️ ದಯಾನಂದ ರೈ ಕಳ್ವಾಜೆ