ಕಾನಿಪ ಸಂಘದ 40ನೇ ರಾಜ್ಯ ಸಮ್ಮೇಳನಕ್ಕೆ ತೆರೆ

ಪತ್ರಕರ್ತರು ಸತ್ಯದ ಪರವಾಗಿರಬೇಕು: ಸಭಾಧ್ಯಕ್ಷ ಯು ಟಿ ಖಾದರ್ ಸಲಹೆ

ಬೀದರ :
ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಹೇಳಿದರು.
ಬೀದರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ನಗರದ ಝೀರಾ ಕನ್ವೆನ್ಶನ್ ಹಾಲನಲ್ಲಿ
ಏಪ್ರಿಲ್ 12ರಂದು ನಡೆದ 40ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ, ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಪತ್ರಕರ್ತರ ಪೆನ್ನು ಸದಾಕಾಲ ಸತ್ಯದ ಪರವಾಗಿರಬೇಕು ಎಂದು ಸಲಹೆ ಮಾಡಿದರು.


ನಮ್ಮ ದೇಶದ ಪ್ರಬಲ ಶಕ್ತಿಯಾದ ಪತ್ರಿಕೋದ್ಯಮ, ಪತ್ರಕರ್ತರು, ಈ ದೇಶದ ಎಲ್ಲ ಜನರು ಒಂದೇ ಎಂದು ಹೇಳುವ ಅವಶ್ಯಕತೆಯಿದೆ.
ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾದ ಬರವಣಿಗೆಯ ಶಕ್ತಿಯನ್ನು ಪತ್ರಕರ್ತರು ಹೊಂದಬೇಕು ಎಂದು ಅವರು ಸಲಹೆ ಮಾಡಿದರು.
ರಾಜಕೀಯ ಮತ್ತು ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಎರಡೂ ಉತ್ತಮವಾದಾಗ ಸಮಾಜವು ಸಂಪನ್ನವಾಗಿರಲು ಸಾಧ್ಯವಿದೆ.
ಪತ್ರಿಕೆಗಳು ಬರೀ ಟೀಕೆ, ಹೊಗಳಿಕೆಗೆ ಮಾತ್ರ ಸೀಮಿತವಾಗಬಾರದು. ಉತ್ತಮವಾಗಿ ಕೆಲಸ ಮಾಡುವರಿಗೆ ಪ್ರೇರಣೆಯಾಗುವ ಕಾರ್ಯ ಮಾಡಬೇಕು. ಮತ್ತು ಯಾವಾಗಲು ಪ್ರಾಮಾಣಿಕ ಸತ್ಯವನ್ನು ಪ್ರತಿಪಾದಿಸಬೇಕು ಎಂದು ಅವರು ತಿಳಿಸಿದರು.


ಕಣ್ಣು, ಕಿವಿ ತೆರೆದು ಸಮಾಜವನ್ನು ತಲಸ್ಪರ್ಶಿಯಾಗಿ ನೋಡಿದಾಗಲೇ ಉತ್ತಮ ಪತ್ರಕರ್ತನಾಗಲು ಸಾಧ್ಯವಿದೆ ಎಂದು ಅವರು ಸಲಹೆ ಮಾಡಿದರು.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಬೀದರ ಜಿಲ್ಲೆಯು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನ ನಡೆದಿರುವುದು ಸಂತಷ ತಂದಿದೆ ಎಂದರು.


ತನಿಖಾ ಮಾಧ್ಯಮವು ಈಗ ಮರೆಯಾಗುತ್ತಿದೆ.‌ ಈ ಬಗ್ಗೆ ಪತ್ರಕರ್ತರು ಅವಲೋಕನ ಮಾಡಬೇಕು ಎಂದರು.
ಪತ್ರಕರ್ತರಿಗೆ ಸಂರಕ್ಷಣೆ ಕೊಡುವ ವಿಷಯದಲ್ಲಿ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದ ಸಚಿವರು, ಪತ್ರಕರ್ತರು ಮಾಧ್ಯಮದ ಪಾವಿತ್ರ್ಯತೆ ಕಾಪಾಡಬೇಕು. ಈ ಮೂಲಕ ರಾಷ್ಟ್ರದ ಅಭಿವೃದ್ದಿಗೆ ಉತ್ತಮ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.


ವಿರೋಧ ಪಕ್ಷದ ‌ನಾಯಕರಾದ ಆರ್ ಅಶೋಕ ಅವರು ಮಾತನಾಡಿ, ಪತ್ರಿಕೋದ್ಯಮವು ಈಗ ಹೊಸ ತಿರುವು ಪಡೆದಿದೆ. ಮಾಧ್ಯಮವನ್ನು ಕಪಿಮುಷ್ಟಿಯಲ್ಲಿಡಬಾರದು. ವಿರೋಧ ಪಕ್ಷದ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಎದೆಗಾರಿಕೆಯಿಂದ, ಧೈರ್ಯದಿಂದ ವೃತ್ತಿ ಮಾಡಿದಾಗ ಪತ್ರಿಕಾವೃತ್ತಿಯ ಘನತೆ ಹೆಚ್ಚಲಿದೆ ಎಂದರು.
ಮುಖಂಡರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ, ಪತ್ರಿಕಾವೃತ್ತಿ ಈಗ ಕಷ್ಟಕರವಾಗಿದೆ. ಹಾಗಾಗಿ ಸರ್ಕಾರ ಪತ್ರಕರ್ತರಿಗೆ ಸ್ಪಂದನೆ ನೀಡಬೇಕು ಎಂದು ಸಲಹೆ ಮಾಡಿದರು. ಪತ್ರಕರ್ತರ ಸಂಘ ಕಟ್ಟಿದ ಡಿವಿಜಿ ಅವರ ಶ್ರಮವನ್ನು ಸ್ಮರಿಸಬೇಕು ಎಂದು ಸಲಹೆ ಮಾಡಿದರು.
ಸಮಾರಂಭದಲ್ಲಿ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ, ಮಾರುತಿರಾವ್ ಮೂಳೆ,
ರಾಜ್ಯ ಮಾಹಿತಿ ಆಯುಕ್ತರಾದ ಬಿ ವೆಂಕಟಸಿಂಗ್, ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ, ಮುಖಂಡರಾದ ರಮೇಶ ಪಾಟೀಲ, ಶಕುಂತಲಾ ಬೆಲ್ದಾಳೆ ಹಾಗು ಇತರರು ಇದ್ದರು. ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದೇವಪ್ಪ ಸ್ವಾಗತಿಸಿದರು. ಸಮಾರಂಭದ ಬಳಿಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!