ಓವರ್‌ಟೇಕ್ ದುರಂತ: ಬೈಕ್ ಸವಾರ ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು

ಮಂಗಳೂರು:ಓವರ್ ಟೇಕ್ ಮಾಡುವ ಭರದಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಮೈನ್ಸ್ ಒಯ್ಯುತ್ತಿದ್ದ ಭಾರೀ ಗಾತ್ರದ ಟಿಪ್ಪರ್ ಗೆ ಬಡಿದು ರಸ್ತೆಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂತೂರು ಬಳಿ ನಡೆದಿದೆ.

ತಾರಾಯಿತೋಟ ಎಂಬಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಮಧ್ಯ ವಯಸ್ಕ ಛಾಯಾಗ್ರಾಹಕರಾಗಿದ್ದ ವ್ಯಕ್ತಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಭೀಕರ ಘಟನೆಯ ದೃಶ್ಯವು ಟೆಂಪೋವೊಂದರ ಡ್ಯಾಷ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಧರ್ಮಸ್ಥಳ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ (27) ಮೃತ ಯುವಕ. ಈತ ಗುರುಪುರದಲ್ಲಿ ಚಿಪ್ಸ್ ತಯಾರಿ ಮಳಿಗೆಯಲ್ಲಿ ಕಾರ್ಮಿಕನಾಗಿದ್ದು, ಕೆಲಸ ಮುಗಿಸಿ ಜಪ್ಪಿನಮೊಗರಿನ ತನ್ನ ಬಾಡಿಗೆ ರೂಮ್ ಕಡೆ ತೆರಳುತ್ತಿದ್ದ ವೇಳೆ ನಂತೂರು ತಾರಾಯಿ ತೋಟ ಎಂಬಲ್ಲಿ ಅಪಘಾತ ನಡೆದಿದೆ.

ಘಟನೆಯಿಂದ ಸ್ಕೂಟರ್ ಚಾಲಕ ನಾಗುರಿ ನಿವಾಸಿ ಛಾಯಾಗ್ರಾಹಕ ಮೋಹನ್ ರಾಜ್ (64) ಅವರ ತಲೆಗೆ ಗಂಭೀರ ಗಾಯಗೊಂಡಿದ್ದು ಕಂಕನಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಮೋಹನ್ ರಾಜ್ ಅವರು ಪದವಿನಂಗಡಿಯಲ್ಲಿ ಸ್ಟುಡಿಯೊ ಹೊಂದಿದ್ದು, ಅವರ ಮಗಳಿಗೆ ಇದೇ ಬರುವ ಮೇ 10 ರಂದು ಮದುವೆ ನಿಗದಿಯಾಗಿದ್ದು ಅದಕ್ಕೆ ತಯಾರಿ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಹೆದ್ದಾರಿಯಲ್ಲಿ ನಡೆದ ಈ ಭೀಕರ ಅಪಘಾತದ ದೃಶ್ಯವು ಉಡುಪಿಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಗಂಗಾಧರ್ ಅಂಬ್ಲಮೊಗರು ಎಂಬವರ ಟೆಂಪೋ ವಾಹನದ ಡ್ಯಾಷ್ ಬೋರ್ಡ್ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಅಪಘಾತ ನಡೆದ ತಕ್ಷಣವೇ ಗಂಗಾಧರ್ ಅವರು ಗಾಯಾಳು ಮೋಹನ್ ಅವರನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಟಿಪ್ಪರ್ ಚಾಲಕನಿಗೆ ಅಪಘಾತದ ಬಗ್ಗೆ ಅರಿವೇ ಬಾರದೆ ಮುಂದಕ್ಕೆ ಸಾಗಿದ್ದು, ಗಂಗಾಧರ್ ಅವರ ಮಾಹಿತಿಯ ಮೇರೆಗೆ ಕದ್ರಿ ಸಂಚಾರಿ ಠಾಣೆ ಪೊಲೀಸರು ಟಿಪ್ಪ‌ರ್ ಮತ್ತು ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮೃತ ಗೋಪಾಲಕೃಷ್ಣ ಅವರ ತಂದೆ ಮೃತರಾಗಿದ್ದು, ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಗೋಪಾಲಕೃಷ್ಣನನ್ನು ಮದುವೆ ಮಾಡಿಸಲು ಕುಟುಂಬಸ್ಥರು ವಧುವಿನ ಅನ್ವೇಷಣೆಯಲ್ಲಿ ತೊಡಗಿದ್ದರಂತೆ. ಆದರೆ ಗೋಪಾಲಕೃಷ್ಣ ಅವರ ದುಡುಕಿನ ಚಾಲನೆಯಿಂದಾಗಿ ಇದೀಗ ಎರಡು ಕುಟುಂಬಗಳು ಕಣ್ಣೀರಲ್ಲಿ ಮುಳುಗುವಂತಾಗಿದೆ. ಯುವಕ ಎಫ್ ಜೀ ಬೈಕ್ ಚಾಲನೆ ಮಾಡುತ್ತಿದ್ದು ಅತಿ ವೇಗ ಮತ್ತು ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!