ಕಾರವಾರ ಮಂಗಳೂರು ಬೆಂಗಳೂರು ಮಧ್ಯೆ ಚಲಿಸುತ್ತಿದ್ದ ರೈಲಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅದೇ ರೈಲಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ ಘಟನೆ ಮಂಗಳೂರಿನ ಬಂಟ್ವಾಳ ಸಮೀಪದ ಬಿಸಿರೋಡ್ ಬಳಿ ನಡೆದಿದೆ.
ಮಂಗಳೂರು ಜಂಕ್ಷನ್ನಿಂದ ಹೊರಟ ರೈಲಿನಲ್ಲಿ ಮೈಸೂರು ಮೂಲದ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿತ್ತು. ರೈಲು ಬಿ.ಸಿ.ರೋಡ್ ತಲುಪಿದಾಗ ಗರ್ಭಿಣಿಗೆ ತೀವ್ರ ರಕ್ತಸ್ರಾವವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ಸುಮಾರು 30 ನಿಮಿಷಗಳ ಕಾಲ ವೈದ್ಯರಿಗಾಗಿ ಕಾಯಲಾಯಿತು. ಆದರೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಲಭಿಸದ ಕಾರಣ ರೈಲಲ್ಲಿದ್ದ ಇಬ್ಬರು ಮುಸ್ಲಿಮ್ ಮಹಿಳೆಯರು ಧೈರ್ಯದಿಂದಲೇ ಹೆರಿಗೆ ಮಾಡಿಸಲು ಮುಂದಾದರು.
ತಕ್ಷಣ ಅವರು ರೈಲಿನ ಬೋಗಿಗೆ ಪರದೆ ಕಟ್ಟಿ ಹೆರಿಗೆಗಾಗಿ ಪ್ರಯತ್ನಿಸಿದರು. ರಕ್ತಸ್ರಾವವಾಗುತ್ತಿದ್ದರೂ ಧೃತಿಗೆಡದೆ ಪ್ರಯತ್ನ ಮುಂದುವರಿಸಿದರು. ಅವರೊಂದಿಗೆ ರೈಲಿನಲ್ಲಿದ್ದ ಇತರ ಮಹಿಳೆಯರೂ ಸಹಕರಿಸಿದರು. ಕೊನೆಗೂ ಸಹಜ ಹೆರಿಗೆ ಮಾಡಿಸುವಲ್ಲಿ ಮಹಿಳೆಯರ ತಂಡ ಯಶಸ್ವಿಯಾಯಿತು. ಬಳಿಕ ತಾಯಿ-ಮಗುವನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು