ಬಂಟ್ವಾಳ: ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಶಿಫಾರಸ್ಸಿನಲ್ಲಿ ಕೊಳ್ನಾಡು ಕುಳಾಲು ಆರೋಗ್ಯ ಉಪಕೇಂದ್ರಕ್ಕೆ(ಆರೋಗ್ಯ ಮತ್ತು ಕ್ಷೇಮಕೇಂದ್ರ) ₹65 ಲಕ್ಷದ ನೂತನ ಕಟ್ಟಡ ಮಂಜೂರು
ಶ್ರೀ.ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಬೇಡಿಕೆಗೆ ಸ್ಪಂದಿಸಿ ಕೊಳ್ನಾಡು ಗ್ರಾಮಕ್ಕೆ ಆರೋಗ್ಯ ಸೇವೆಗಳ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ನೂತನ ಕಟ್ಟಡಕ್ಕೆ ₹65 ಲಕ್ಷ ಮಂಜೂರಾಗಿದೆ. ವಿಧಾನಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರ ಶಿಪಾರಸ್ಸಿನ ಮೇರೆಗೆ ಈ ಯೋಜನೆಗೆ ವೇಗ ಸಿಕ್ಕಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಸಮೀಪದಲ್ಲೇ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಒದಗಿಸುವ ಉದ್ದೇಶ ಈ ಯೋಜನೆಯ ಹೃದಯವಾಗಿದೆ.,
ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಅನುಮೋದನೆಯೊಂದಿಗೆ ಕಟ್ಟಡವನ್ನು ಅಧಿಕೃತ ಪಟ್ಟಿಗೆ ಸೇರಿಸಲಾಗಿದ್ದು, ತಾಯಿ-ಮಗು ಆರೈಕೆ, ಲಸಿಕಾ ಕಾರ್ಯಕ್ರಮಗಳು, ಮೂಲಭೂತ ತಪಾಸಣೆ ಮತ್ತು ತುರ್ತು ಸೇವೆಗಳ ವಿಸ್ತರಣೆಗೆ ಇದು ನೆರವಾಗಲಿದೆ. ಸ್ಥಳೀಯರಿಗೆ ಸುಲಭ ಪ್ರವೇಶ, ಸಮಯೋಚಿತ ಚಿಕಿತ್ಸೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯ ಸುಧಾರಿಸುವ ಇರಾದೆ ಹೊಂದಿದೆ.
ಗ್ರಾಮಾಭಿವೃದ್ಧಿಯ ಬಗ್ಗೆ ಸದಾ ಕಾಳಜಿ ವಹಿಸಿದ ಕೊಳ್ನಾಡು ಗ್ರಾಮ ಪಂಚಾಯತ್ನ ಸುದೀರ್ಘ ಅವಧಿಯ ಮಾಜಿ ಅಧ್ಯಕ್ಷರಾದ ಶ್ರೀ. ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರ ಪಾತ್ರ ಇಲ್ಲಿ ಸ್ಮರಣೀಯ. ಉಪಕೇಂದ್ರಕ್ಕಾಗಿ ಸ್ಥಳ ಗುರುತಿಸುವ ಹಂತದಲ್ಲೇ ಅವರು ವಹಿಸಿದ ಮುಂದಾಳತ್ವ, ಸಮನ್ವಯ ಮತ್ತು ಜನಪರ ದೃಷ್ಟಿಕೋನ ಇಂದು ಫಲಿತಾಂಶ ಕಂಡಿದೆ. ಅವರ ದೂರದೃಷ್ಟಿ ಹಾಗೂ ನಿರಂತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸುಗ್ರಾಮವನ್ನಾಗಿಸಿದ ಅವರ ಹೋರಾಟದ ಫಲ ಎಂದು ಗ್ರಾಮಸ್ಥರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಿದ್ದಾರೆ.
ಅಲ್ಲದೆ ಕೊಳ್ನಾಡು ಗ್ರಾಮ ಪಂಚಾಯತ್ ಬಳಿ ಹಾಗೂ ಸುರಿಬೈಲ್ ಉಪಕೇಂದ್ರ ಕಟ್ಟಡಕ್ಕೂ ತಲಾ 65 ಲಕ್ಷ ರೂ ಜಿಲ್ಲಾ ಉಸ್ತುವಾರಿ ಸಚಿವರು ಅನುಮೋದನೆ ನೀಡಿರುವುದು ಆರೋಗ್ಯ ಬಲವರ್ದನೆ ಸಹಕಾರಿಯಾಗಿದೆ.