ಮಂಗಳೂರು: ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣರ ಎಸೋಸಿಯೇಶನ್ ಹಾಗೂ ತುಳುನಾಡು ಎಜುಕೇಶನಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ನಗರದ ಕೊಡಿಯಾಲ್ಬೈಲ್ನಲ್ಲಿ ಮೇ 10ರಿಂದ 16ರವರೆಗೆ ‘ಶ್ರೀಮದ್ ಭಾಗವತ ಸಪ್ತಾಹ ಪ್ರವಚನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತುಳುನಾಡು ಎಜ್ಯುಕೇಶನಲ್ ಟ್ರಸ್ಟ್ (ರಿ.)ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕೊಡಿಯಾಲ್ಬೈಲ್ನ ಎಸ್.ಕೆ.ಡಿ.ಬಿ. ಆವರಣದಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಈ ಪ್ರವಚನ ನಡೆಯಲಿದ್ದು, ಹುಬ್ಬಳ್ಳಿಯ ಪ್ರಸಿದ್ಧ ಪ್ರವಚನಕಾರ ಶ್ರೀಹರಿ ಆಚಾರ್ಯ ವಾಳ್ವೇಕರ್ ಅವರು ಏಳು ದಿನಗಳ ಕಾಲ ಭಾಗವತದ ಸಾರವನ್ನು ಭಕ್ತರಿಗೆ ವಿವರಿಸಲಿದ್ದಾರೆ ಎಂದು ತಿಳಿಸಿದರು .
ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಪ್ರವಚನ ನಡೆಯಲಿದ್ದು, ಸಂಜೆ 5 ಗಂಟೆಯಿಂದ ವಿವಿಧ ಮಾತೃಮಂಡಳಿಗಳಿಂದ ‘ಶ್ರೀ ಭಗವನ್ನಾಮ ಸಂಕೀರ್ತನೆ’ ಕಾರ್ಯಕ್ರಮವೂ ನಡೆಯಲಿದೆ. ಸಪ್ತಾಹದ ಅವಧಿಯಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.
ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಸೋಸಿಯೇಶನ್ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ರಾವ್, ಕಾರ್ಯದರ್ಶಿ ವಿವೇಶ್ ತಂತ್ರಿ ಹಾಗೂ ಕೋಶಾಧಿಕಾರಿ ಸುಧಾಕರ್ ರಾವ್ ಪೇಜಾವರ ಉಪಸ್ಥಿತರಿದ್ದರು