ಮೇ 15ರಂದು ಮಾಹೆ 33ನೇ ಘಟಿಕೋತ್ಸವ; ಮಂಗಳೂರು ಕ್ಯಾಂಪಸ್‌ನಲ್ಲಿ ಭವ್ಯ ಸಮಾರಂಭ

ಮಂಗಳೂರು,:ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ 33ನೇ ಘಟಿಕೋತ್ಸವ ಸಮಾರಂಭವು ಶುಕ್ರವಾರ, ಮೇ 15 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರು ಕ್ಯಾಂಪಸ್‌ ಡಾ. ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್ ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಮೇ 16ರ, ಶನಿವಾರ ಮಧ್ಯಾಹ್ನ 2:30ಕ್ಕೆ ‘ಮಾಹೆ ಆನ್‌ಲೈನ್ ಶಿಕ್ಷಣ’ದ 3ನೇ ಘಟಿಕೋತ್ಸವ ಆಯೋಜಿಸಲಾಗಿದ್ದು, ಆನ್‌ಲೈನ್ ಶಿಕ್ಷಣ ಪಡೆದ ಪದವೀಧರರಿಗೆ ಪದವಿ ಪ್ರದಾನ ಮಾಡಲಾಗುವುದೆಂದರು .

ಮೇ 15 ನಡೆಯಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ನಿರ್ದೇಶಕರಾದ ಪ್ರೊ. (ಡಾ.) ಸುದೀಪ್ ಗುಪ್ತಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ನಿಟ್ಟೆ ಎಜುಕೇಶನ್ ಟ್ರಸ್ಟ್‌ನ (ಪರಿಗಣಿತ ವಿಶ್ವವಿದ್ಯಾಲಯ) ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ್ ಶೆಟ್ಟಿ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು .

ಮೇ 16ರ ಆನ್‌ಲೈನ್ ಶಿಕ್ಷಣದ ಘಟಿಕೋತ್ಸವದಲ್ಲಿ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಲೀ ಎಸ್. ನಾಯ‌ರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಯುನೆಕ್ಸ್ ಲರ್ನಿಂಗ್‌ನ ಸಿಇಒ ಅಂಬರೀಶ್ ಸಿನ್ಹಾ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು

ಈ ಸಮಾರಂಭದಲ್ಲಿ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ ಡಾ. ಶರತ್ ಕೆ. ರಾವ್, ಮಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ದಿಲೀಪ್ ಜಿ. ನಾಯಕ್, ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ನಾರಾಯಣ ಸಭಾಹಿತ್, ಮಾಹೆ ಬೆಂಗಳೂರು ಕ್ಯಾಂಪಸ್ ಹಾಗೂ ಎಂಎಲ್‌ಎಚ್‌ಎಸ್ ಸಹ ಕುಲಪತಿ ಪ್ರೊ. (ಡಾ.) ಮಧು ವೀರರಾಘವನ್, ಕುಲಸಚಿವ (ಮೌಲ್ಯಮಾಪನ) ಡಾ. ವಿನೋದ್ ವಿ. ಥಾಮಸ್ ಮತ್ತು ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಅವರು ಭಾಗವಹಿಸಲಿದ್ದಾರೆ ಎಂದರು

ಘಟಿಕೋತ್ಸವದ ಮೊದಲ ದಿನ 554 ವಿದ್ಯಾರ್ಥಿಗಳು ನೇರವಾಗಿ ಪದವಿ ಸ್ವೀಕರಿಸಲಿರುವರು , 22 ಮಂದಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು , 682 ವಿದ್ಯಾರ್ಥಿಗಳಿಗೆ ಗೈರುಹಾಜರಿಯಲ್ಲಿ ಪದವಿ ನೀಡಲಾಗುವುದು .

ಘಟಿಕೋತ್ಸವದ ಎರಡನೇ ದಿನ 451 ವಿದ್ಯಾರ್ಥಿಗಳು ನೇರವಾಗಿ ಪದವಿ ಸ್ವೀಕರಿಸಲಿರುವರು . 535 ಮಂದಿಗೆ ಗೈರುಹಾಜರಿಯಲ್ಲಿ ಗೈರುಹಾಜರಿಯಲ್ಲಿ ಪದವಿ ನೀಡಲಾಗುವುದು . ಮೊದಲ ದಿನ ಒಟ್ಟು 1258 ಪದವಿಗಳನ್ನು, ದ್ವಿತೀಯ ದಿನ 986 ಪದವಿಗಳನ್ನು ಪ್ರಧಾನ ಮಾಡಲಾಗುವುದೆಂದರು .

ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ ಶೈಕ್ಷಣಿಕ ಶ್ರೇಷ್ಠತೆಗಾಗಿ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಬದುಕಿನ ಹೊಸ ಪಯಣದ ಸಂಕಲ್ಪದೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದರು .

ಪತ್ರಿಕಾಗೋಷ್ಠಿಯಲ್ಲಿ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಡೀನ್ ಡಾ. ಅಶಿತಾ ಉಪ್ಪುರು , ಪ್ರಮುಖರಾದ ಡಾ ಶೀತಲ್ ಉಳ್ಳಾಲ್ , ಭರತ್ ಕುಮಾರ್ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!