ಮಂಜೇಶ್ವರ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಿನಡ್ಕ ಎಂಬಲ್ಲಿ ಸಣ್ಣ ವಿಚಾರಕ್ಕೆ ನಡೆದ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ. ಕುಂಬಡಾಜೆ ಸಹಕಾರಿ ಬ್ಯಾಂಕ್ನ ಭದ್ರತಾ ಸಿಬ್ಬಂದಿ, ಬದ್ರ ಕುಡ್ಲು ನಿವಾಸಿ ಸುರೇಶ್ (42) ಎಂಬುವವರು ದುಷ್ಕರ್ಮಿಗಳ ಚಾಕು ಇರಿತದಿಂದ ಸಾವನ್ನಪ್ಪಿದ ದುರ್ದೈವಿ.
ಭಾನುವಾರ ಸಂಜೆ ಕುಂಬಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಆಟಗಾರರ ನಡುವೆ ಸಣ್ಣ ವಾಕ್ಸಮರ ನಡೆದಿತ್ತು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಆರೋಪಿಗಳು, ರಾತ್ರಿ ಕುಂಬಡಾಜೆ ಸಹಕಾರಿ ಬ್ಯಾಂಕ್ ಬಳಿ ಇದ್ದ ಸುರೇಶ್ ಅವರ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾರ್ಪಿನಡ್ಕ ನಿವಾಸಿಗಳಾದ ಕಿರಣ್ ಮತ್ತು ಅಖಿಲೇಶ್ ಎಂಬುವವರ ವಿರುದ್ಧ ಬದಿಯಡ್ಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕೇವಲ ಆಟದ ಮೈದಾನದ ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಕೊಲೆಯಾಗಿರುವುದು ಇಡೀ ಪರಿಸರದಲ್ಲಿ ಆತಂಕ ಮತ್ತು ದಿಗ್ಭ್ರಮೆಯನ್ನು ಉಂಟುಮಾಡಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ.