ಬಾಯಾರು : ರಸಗೊಬ್ಬರದ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ರೈತಸಂಘದ ಮಂಜೇಶ್ವರ ಏರಿಯಾ ಸಮಿತಿಯ ನೇತೃತ್ವದಲ್ಲಿ ಬಾಯಾರು ಪದವಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನಾ ಸಭೆಯನ್ನು ರೈತಸಂಘದ ರಾಜ್ಯ ಸಮಿತಿ ಸದಸ್ಯ ಕೆ.ಆರ್. ಜಯಾನಂದ ಉದ್ಘಾಟಿಸಿ ಮಾತನಾಡಿ, ರಸಗೊಬ್ಬರ ದರ ಏರಿಕೆಯಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚಂದ್ರಹಾಸ ಶೆಟ್ಟಿ ಮಾಸ್ಟರ್ ವಹಿಸಿದ್ದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರೈತಸಂಘ ಜಿಲ್ಲಾ ಸಮಿತಿ ಸದಸ್ಯರಾದ ಗೀತಾ ಸಾಮಾನಿ, ಪುರುಷೋತ್ತಮ ಬಿ., ಶ್ಯಾಮ್ ಭಟ್ ಮಾಸ್ಟರ್, ವಿನಯ್ ಕುಮಾರ್ ಬಾಯಾರ್, ಚಂದ್ರ ನಾಯಕ್, ಹುಸೇನ್ ಮಾಸ್ಟರ್ ಹಾಗೂ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.