ಕಾಸರಗೋಡು: ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಎಡನಾಡು ಕೋರ್ನಕಂಡದಲ್ಲಿ, ಪಂಚಾಯತ್ ಆಡಳಿತಕ್ಕೆ ಸೇರಿದ ಸುಮಾರು 50 ವರ್ಷಗಳ ಹಳೆಯ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲಾಗಿದೆ.
ಸುಮಾರು 1 ಲಕ್ಷ ರೂ. ಮೌಲ್ಯದ ಮಾವು, ಹಾಲೆ ಮತ್ತು ಅಕೇಶಿಯಾ ಮರಗಳನ್ನು ಮೇ 26ರಂದು ಸದ್ದಿಲ್ಲದೆ ಕಳ್ಳತನ ಮಾಡಲಾಗಿದೆ.ಖಾಸಗಿ ಜಮೀನಿನ ಮರಗಳನ್ನು ಕಡಿಯುವ ನೆಪದಲ್ಲಿ ಪಂಚಾಯತ್ ಒಡೆತನದ ತೋಡಿನ ಬದಿಯಲ್ಲಿದ್ದ ಮರಗಳನ್ನೂ ಕಡಿದು ಸಾಗಿಸಲಾಗಿದೆ ಎಂದು ಪಂಚಾಯತ್ ಕಾರ್ಯದರ್ಶಿ ಸುದೀಶ್ ಅವರು ನೀಡಿದ ದೂರಿನ ಮೇರೆಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಒತ್ತಾಯಿಸಿ ಡಿವೈಎಫ್ಐ ಇಂದು ಪಂಚಾಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.