ಹೋರ್ಮುಜ್ ಜಲಸಂಧಿ ಸಮೀಪ ಹಡಗಿನ ಮೇಲೆ ದಾಳಿ: ಮೂವರು ಭಾರತೀಯ ನಾವಿಕರ ದುರ್ಮರಣ

ಟೆಹ್ರಾನ್, ಜೂ.11: ಹೋರ್ಮುಜ್ ಜಲಸಂಧಿ ಸಮೀಪ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದು ದೃಢಪಟ್ಟಿದೆ. ಆರಂಭದಲ್ಲಿ ಇಬ್ಬರು ಮೃತಪಟ್ಟಿದ್ದು, ಮುಖ್ಯ ಇಂಜಿನಿಯರ್ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದರೂ, ಬಳಿಕ ಅವರ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮೂವರಿಗೆ ಏರಿಕೆಯಾಗಿದೆ.

ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (ಎಫ್‌ಎಸ್‌ಯುಐ) ಪ್ರಧಾನ ಕಾರ್ಯದರ್ಶಿ ಮನೋಜ್ ಯಾದವ್ ಅವರು, ದಾಳಿಗೊಳಗಾದ ಹಡಗಿನೊಂದಿಗೆ ಸಂಪರ್ಕಕ್ಕೆ ತೊಂದರೆ ಉಂಟಾಗಿದ್ದು, ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೃತರಾದ ಮೂವರು ನಾವಿಕರು ಹಿಮಾಚಲ ಪ್ರದೇಶ, ಉತ್ತರ ಪ್ರದೇಶದ ದೇಓರಿಯಾ ಹಾಗೂ ಆಂಧ್ರ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಪ್ರತಿಕ್ರಿಯಿಸಿ, ಪಲಾವ್ ಧ್ವಜ ಹೊತ್ತ ಎಂಟಿ ಸೆಟ್ಟಿಬೆಲ್ಲೊ (MT Settibello) ಹಡಗಿನಲ್ಲಿದ್ದ ಮೂವರು ಭಾರತೀಯ ನಾವಿಕರ ಸಾವನ್ನು ದೃಢಪಡಿಸಿದ್ದಾರೆ.

ಒಮನ್ ಕರಾವಳಿ ಸಮೀಪ ಸಂಭವಿಸಿದ ಈ ದುರಂತ ಸಮುದ್ರಯಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಮೃತರ ಕುಟುಂಬಗಳೊಂದಿಗೆ ಕೇಂದ್ರ ಸರ್ಕಾರ ನಿಂತಿದೆ ಎಂದು ಸಚಿವರು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಸಿಬ್ಬಂದಿಯನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಹಾಗೂ ಮೃತ ನಾವಿಕರ ಪಾರ್ಥಿವ ಶರೀರಗಳನ್ನು ಅಂತ್ಯಸಂಸ್ಕಾರಕ್ಕಾಗಿ ತ್ವರಿತವಾಗಿ ಸ್ವದೇಶಕ್ಕೆ ರವಾನಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!