ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು,ಈ ಕಾಮಗಾರಿ ಆರಂಭಗೊಂಡು ಇಂದಿನವರೆಗೆ ಅಂದರೆ ನಾಲ್ಕು ಐದು ವರ್ಷಗಳಿಂದ ಜನರು ಮತ್ತು ವಾಹನ ಸವಾರರು ಅನುಭವಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ,ಆಯಾ ಪರಿಸರದ ಜನರು ಮತ್ತು ವಾಹನ ಸವಾರರು ಅದೆಷ್ಟೇ ಸಂಕಷ್ಟಪಟ್ಟರೂ ಕ್ಯಾರೇ ಅನ್ನದ ಗುತ್ತಿಗೆ ವಹಿಸಿಕೊಂಡ ಕೆಎನ್ಆರ್ ಕಂಪೆನಿಯು ತಮಗೆ ಮನಸ್ಸು ಬಂದಂತೆ ವಟ್ರಾಸಿ ಕೆಲಸ ಮಾಡುತ್ತಾ ಹೋಗುತ್ತಿದೆ,ಮಂಗಳೂರು ಕಡೆಯಿಂದ ಮಾಣಿ ಪೇಟೆ ಪ್ರವೇಶಿಸಲು ಅಥವಾ ಪುತ್ತೂರು ಮೈಸೂರು ರಸ್ತೆ ಪ್ರವೇಶಿಸಲು ಬರುವ ವಾಹನಗಳು ಮಾಣಿ ಗ್ರಾಮದ ಹಳೀರ ದಲ್ಲಿ ಸರ್ವಿಸ್ ರಸ್ತೆಯನ್ನು ಸೇರಬೇಕಾಗಿದ್ದು ಈ ಸರ್ವಿಸ್ ರಸ್ತೆ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ,
ಪ್ರವೇಶ ಪಡೆಯುವಲ್ಲಿಯೇ ಮಳೆಗಾಲದ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದೆ ಈ ಭಾಗದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ಸಂಪೂರ್ಣವಾದ ತಡೆಗೋಡೆ ನಿರ್ಮಿಸದೇ ಇರುವುದರಿಂದ, ಸಮೀಪದ ನೀರುಗಳೆಲ್ಲಾ ಸೀದಾ ಹೆದ್ದಾರಿಗೆ ಬಂದು ನಿಲ್ಲುತ್ತಿದೆ,ಇದರಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ಇತರರಿಗೆ ದಿನಂಪ್ರತೀ ನೀರು ಮತ್ತು ಕೆಸರಿನ ಎರಚಾಟ ಆಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿ ನೋಡುತ್ತಾ ಹೋಗುತ್ತಿದ್ದಾರೆ,ಸರ್ವಿಸ್ ಪ್ರವೇಶ ರಸ್ತೆಗಳಿಗೆ ಸರಿಯಾದ ಹಂಪ್ಸ್ ನಿರ್ಮಾಣ ಅನಿವಾರ್ಯತೆಯಾಗಿದ್ದು ವಾಹನಗಳು ಬ್ರೇಕ್ಗೆ ಕಾಲೇ ಇಡದೆ ಬುಸುಗುಟ್ಟುತ್ತಾ ಅದೇ ವೇಗದಲ್ಲಿ ಸರ್ವಿಸ್ ರಸ್ತೆಯನ್ನು ಪ್ರವೇಶಿಸುತ್ತದೆ,ಇದು ನಡೆದುಕೊಂಡುಹೋಗುವವರಿಗೂ ಮತ್ತು ಒಳ ರಸ್ತೆಗಳಿಂದ ಬರುವ ವಾಹನಗಳ ಮಧ್ಯೆ ಭಾರೀ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚೇ ಇರುತ್ತದೆ, ಸಂಬಂಧಪಟ್ಟ ಅಧಿಕಾರಿಗಳು ಜಾಣ ಕುರುಡರಾಗದೆ ಇತ್ತ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಪಡಿಸುತ್ತಿದ್ದಾರೆ.