ಮಂಗಳೂರು: ತೆಲುಗು ಲೇಖಕ ಎಂಡ್ಲೂರಿ ಸುಧಾಕರ್ ಅವರ ‘ಮಲ್ಲೆ ಮೊಗ್ಗುಲ ಗೊಡಗು’ ಕೃತಿಯನ್ನು ವಿಕಾಸ್ ಆರ್. ಮೌರ್ಯ ಅವರು ಕನ್ನಡಕ್ಕೆ ‘ನುಡಿ ಚಮ್ಮಾಳಿಗೆ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದು, ಇದೇ ಜೂನ್ 28ರಂದು ಮಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ.
ಮಾದಿಗ ಸಮುದಾಯದ ಬದುಕು, ಸಂಸ್ಕೃತಿ, ಹೋರಾಟ ಮತ್ತು ಸಾಮಾಜಿಕ ಅನುಭವಗಳನ್ನು ದಾಖಲಿಸುವ ಈ ಕಥಾಸಂಕಲನದ ಎಲ್ಲ ಕಥೆಗಳೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಮತ್ತು ಸಾಮಾಜಿಕ ದೃಷ್ಟಿಕೋನದ ನೆಲೆಯಲ್ಲಿ ರೂಪುಗೊಂಡಿವೆ. ಕನ್ನಡ ಸಾಹಿತ್ಯ ಲೋಕದಲ್ಲಿ ‘ನುಡಿ ಚಮ್ಮಾಳಿಗೆ’ ವಿಶಿಷ್ಟ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತವಾಗಿದೆ.
‘ಜೀರುಂಡೆ ಪುಸ್ತಕ’ ಪ್ರಕಟಿಸಿರುವ ಈ ಕೃತಿಯ ಬಿಡುಗಡೆ ಸಮಾರಂಭವು ಜೂನ್ 28ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹೋದಯ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಾ. ವಾಸು ಬೆಳ್ಳೆ ಅವರು ಕೃತಿಯನ್ನು ಬಿಡುಗಡೆ ಮಾಡಲಿದ್ದು, ಆತ್ರಾಡಿ ಅಮೃತಾ ಶೆಟ್ಟಿ ಅವರು ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಸಂತ ಅಲೋಶಿಯಸ್ನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ನಾಯಕ್, ಅನುವಾದಕ ವಿಕಾಸ್ ಆರ್. ಮೌರ್ಯ ಹಾಗೂ ಪ್ರಕಾಶಕ ಧನಂಜಯ್ ಎನ್. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
– ಫಾತಿಮಾ ರಲಿಯಾ