ಭೋರ್ ಘಾಟ್ನಲ್ಲಿ ಮೂರು ರೈಲು ಹಳಿಗಳ ಮೇಲೆ ಭೂಕುಸಿತ; ಹಲವು ಪ್ರಮುಖ ರೈಲುಗಳ ಸೇವೆ ರದ್ದು
ಮುಂಬೈ, ಜುಲೈ 6: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಮುಂಬೈ–ಪುಣೆ ನಡುವಿನ ರೈಲು ಹಾಗೂ ರಸ್ತೆ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ. ಭೋರ್ ಘಾಟ್ (ಖಂಡಾಲಾ ಘಾಟ್) ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದ ಮೂರು ರೈಲು ಹಳಿಗಳ ಸಂಚಾರ ಸ್ಥಗಿತಗೊಂಡಿದ್ದು, ಹಲವು ಪ್ರಮುಖ ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.
ನಿರಂತರ ಮಳೆಯಿಂದ ಪುಣೆ–ಮುಂಬೈ ಎಕ್ಸ್ಪ್ರೆಸ್ವೇ, ಹಳೆಯ ಮುಂಬೈ–ಪುಣೆ ರಾಷ್ಟ್ರೀಯ ಹೆದ್ದಾರಿ ಹಾಗೂ ಪರ್ಯಾಯ ರಸ್ತೆ ಮಾರ್ಗಗಳಲ್ಲೂ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅಗತ್ಯವಿಲ್ಲದಿದ್ದರೆ ಮುಂಬೈ–ಪುಣೆ ನಡುವಿನ ಪ್ರಯಾಣವನ್ನು ಮುಂದೂಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


ಕೇಂದ್ರ ರೈಲ್ವೆ ಅಧಿಕಾರಿಗಳ ಮಾಹಿತಿ ಪ್ರಕಾರ, ಕರ್ಜತ್–ಲೋನಾವಾಲ ನಡುವಿನ ಭೋರ್ ಘಾಟ್ ವಿಭಾಗದಲ್ಲಿ ಹಲವು ಕಡೆ ಭೂಕುಸಿತ ಸಂಭವಿಸಿದೆ. ಠಾಕುರ್ವಾಡಿ–ಮಂಕಿ ಹಿಲ್ ಲೂಪ್ ಕ್ಯಾಬಿನ್ ನಡುವಿನ ಅಪ್ ಲೈನ್ನಲ್ಲಿ ಮೊದಲ ಭೂಕುಸಿತ ಸಂಭವಿಸಿದ್ದು, ಬಳಿಕ ಖಂಡಾಲಾ–ಮಂಕಿ ಹಿಲ್ ನಡುವಿನ ಮಧ್ಯದ ರೈಲು ಹಳಿಯ ಮೇಲೂ ಸೋಮವಾರ ಮುಂಜಾನೆ ಮತ್ತೊಂದು ಭೂಕುಸಿತ ಉಂಟಾಗಿದೆ.
ಮಣ್ಣು, ಕಲ್ಲು ಹಾಗೂ ಮರಗಳು ರೈಲು ಹಳಿಗಳ ಮೇಲೆ ಬಿದ್ದ ಪರಿಣಾಮ ಮುಂಬೈ ವಿಭಾಗದ ಅಪ್ ಲೈನ್, ಪುಣೆ ವಿಭಾಗದ ಡೌನ್ ಲೈನ್ ಹಾಗೂ ಮಧ್ಯದ ಲೈನ್ ಸೇರಿ ಮೂರು ಹಳಿಗಳಲ್ಲೂ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಳಿಗಳನ್ನು ಶೀಘ್ರ ಪುನಃಸ್ಥಾಪಿಸಲು ರೈಲ್ವೆ ಸಿಬ್ಬಂದಿ ಹಾಗೂ ತುರ್ತು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.
ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸಿಎಸ್ಎಂಟಿ–ಪುಣೆ ಇಂದ್ರಾಯಣಿ ಎಕ್ಸ್ಪ್ರೆಸ್, ಇಂಟರ್ಸಿಟಿ ಎಕ್ಸ್ಪ್ರೆಸ್, ಡೆಕ್ಕನ್ ಎಕ್ಸ್ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್ಪ್ರೆಸ್ ಹಾಗೂ ಧುಳೆ ಎಕ್ಸ್ಪ್ರೆಸ್ ಸೇರಿದಂತೆ ಹಲವು ಪ್ರಮುಖ ರೈಲುಗಳ ಸೇವೆ ರದ್ದುಗೊಂಡಿದೆ. ಪುಣೆ–ಸಿಎಸ್ಎಂಟಿ ಸಿಂಹಗಢ ಎಕ್ಸ್ಪ್ರೆಸ್ ಸೇರಿದಂತೆ ಇನ್ನೂ ಹಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ದೂರ ಪ್ರಯಾಣದ ಹಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಕೆಲವು ರೈಲುಗಳನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ. ಇನ್ನು ಕೆಲವು ರೈಲುಗಳ ಹೊರಡುವ ಸಮಯವನ್ನು ಮರುನಿಗದಿಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತದ ಅಪಾಯ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ರೈಲು ಹಾಗೂ ರಸ್ತೆ ಸಂಚಾರದ ಅಧಿಕೃತ ಮಾಹಿತಿಯನ್ನು ಪಡೆದು ಮಾತ್ರ ಪ್ರಯಾಣ ಕೈಗೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.


