ಮಂಗಳೂರು: ಭಾರತದ ಭವ್ಯ ಇತಿಹಾಸ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶ್ರೇಷ್ಠ ರಾಯಭಾರಿಗಳಾಗಿ ನಮ್ಮ ಯುವಜನತೆ ರೂಪುಗೊಳ್ಳಬೇಕು ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ಮಹಾ ಪ್ರಬಂಧಕ ಕುಮಾರ್ ಬಿ.ಕೆ. ಕರೆ ನೀಡಿದರು.


ಅವರು ಹಿಂದೂ ವಿದ್ಯಾದಾಯಿನಿ ಸಂಘದ ಅಧೀನದ ವಿದ್ಯಾದಾಯಿನಿ ಹೈಸ್ಕೂಲು ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಭಾರತದ ಸಂತ ಪರಂಪರೆ’ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ಭಾರತವು ಸಾಂಸ್ಕೃತಿಕವಾಗಿ ವಿಶ್ವದ ಇತರ ರಾಷ್ಟ್ರಗಳಿಗಿಂತ ವಿಶಿಷ್ಟ ಮತ್ತು ಶ್ರೇಷ್ಠ ದೇಶವಾಗಿದ್ದು, ದೇಶದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಸಮಗ್ರ ಅರಿವು ಹೊಂದಿರುವ ಯುವಜನತೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೋವಿಂದ ದಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಹರೀಶ ಆಚಾರ್ಯ, ಬದಲಾವಣೆ ಜಗದ ನಿಯಮವಾಗಿದ್ದು, ಉತ್ತಮ ಬದಲಾವಣೆಗಳನ್ನು ಸ್ವೀಕರಿಸುತ್ತಲೇ ಭಾರತದ ಶ್ರೇಷ್ಠ ಪರಂಪರೆಗೆ ಕೊಡುಗೆ ನೀಡಿದ ಮಹನೀಯರ ಜೀವನ ಮತ್ತು ತತ್ವಗಳನ್ನು ಅರಿತು ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ. ಸುಧಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾದಾಯಿನಿ ಹೈಸ್ಕೂಲಿನ ಸಹಶಿಕ್ಷಕಿ ವಿದ್ಯಾಲಕ್ಷ್ಮಿ ಕೆ. ವಂದಿಸಿದರು. ವಿದ್ಯಾರ್ಥಿನಿ ಲಕ್ಷ್ಮಿ ಗಂಗಾ ಕಾರ್ಯಕ್ರಮ ನಿರೂಪಿಸಿದರು.

