ಮಂಜೇಶ್ವರ : ಉಪ್ಪಳದ ಸೋಂಕಾಲ್ ನಿವಾಸಿ ಅಲ್ತಾಫ್ ಕೊಲೆ ಪ್ರಕರಣದಲ್ಲಿ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಂಗಲ್ಪಾಡಿಯ ಅಬ್ದುಲ್ ರುಮೀದ್ (29) ಎಂಬಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.ಗಲ್ಫ್ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅಧಿಕಾರಿಗಳು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

2019 ಜೂನ್ 23ರಂದು ಅಲ್ತಾಫ್ರನ್ನು ಮನೆಯಿಂದ ಅಪಹರಿಸಿ ಹಲ್ಲೆ ನಡೆಸಿ ಕೈಯ ನರ ಕತ್ತರಿಸಿ ಮಂಗಳೂರು ಆಸ್ಪತ್ರೆ ವರಾಂಡದಲ್ಲಿ ಬಿಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಜೂನ್ 25ರಂದು ಅವರು ಸಾವನ್ನಪ್ಪಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾಗಿ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಲುಕೌಟ್ ನೋಟೀಸ್ ಜಾರಿಗೊಳಿಸಲಾಗಿತ್ತು. ಈತನ ಮೇಲೆ ಇತರೆ 5 ಪ್ರಕರಣಗಳೂ ಇವೆ.



