ಗುರುಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಕಾಸರಗೋಡಿನ ಹಿರಿಯ ಹಾಗೂ ಪ್ರಸಿದ್ಧ ವಕೀಲರಾದ ಶ್ರೀ ಐ.ವಿ. ಭಟ್ ಹಾಗೂ ಅಡೂರು ಉಮೇಶ್ ನಾಯಕ್ ಅವರ ನಿವಾಸಗಳಿಗೆ ತೆರಳಿ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಹಿರಿಯರ ಕಾನೂನು ಸೇವೆ, ಸಮಾಜಮುಖಿ ಕಾರ್ಯ ಹಾಗೂ ಯುವ ವಕೀಲರಿಗೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಅಭಿಭಾಷಕ ಪರಿಷತ್ ರಾಜ್ಯ ಉಪಾಧ್ಯಕ್ಷ ಅಡ್ವೋಕೇಟ್ ಬಿ. ರವೀಂದ್ರನ್ ಅವರು, “ಗುರು ಎಂದರೆ ಜ್ಞಾನವನ್ನು ಹಂಚುವ ದೀಪ. ಹಿರಿಯ ವಕೀಲರು ತಮ್ಮ ಅನುಭವ ಮತ್ತು ಮಾರ್ಗದರ್ಶನದ ಮೂಲಕ ನ್ಯಾಯಾಂಗ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ,” ಎಂದು ಹೇಳಿದರು.

ಜಿಲ್ಲಾ ಅಧ್ಯಕ್ಷ ಅಡ್ವೋಕೇಟ್ ಎ.ಸಿ. ಅಶೋಕ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಅಡ್ವೋಕೇಟ್ ನವೀನ್ ರಾಜ್ ಹಾಗೂ ಅಡ್ವೋಕೇಟ್ ಕರುಣಾಕರ ನಂಬಿಯಾರ್ ಅವರು ಗುರುಗಳ ಸ್ಥಾನಮಾನ, ಕಾನೂನು ವೃತ್ತಿಯಲ್ಲಿ ಅವರ ಮಾರ್ಗದರ್ಶನದ ಮಹತ್ವ ಹಾಗೂ ಗುರುಪೂರ್ಣಿಮೆಯ ಸಂದೇಶದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಯುನಿಟ್ ಕಾರ್ಯದರ್ಶಿ ರಾಜೇಶ್, ಅಡ್ವೋಕೇಟ್ ಪ್ರಕಾಶ್ ರಾವ್, ಅಡ್ವೋಕೇಟ್ ಜಾಹ್ನವಿ ನಾಯಕ್, ಅಡ್ವೋಕೇಟ್ ನವ್ಯ, ಅಡ್ವೋಕೇಟ್ ಸುಚಿತ್ರ ಸೇರಿದಂತೆ ಹಲವಾರು ವಕೀಲರು ಉಪಸ್ಥಿತರಿದ್ದು, ಹಿರಿಯರಿಗೆ ಗೌರವ ಸಲ್ಲಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

