ಕಾಸರಗೋಡು, ಜು. 31: ಇಲಿ ವಿಷ ಸೇವಿಸಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ವೆಳ್ಳರಿಕ್ಕುಂಡು ಸಮೀಪದ ನಾಟ್ಟಂಕಲ್ಲಿನಲ್ಲಿ ನಡೆದಿದೆ.
ಮೃತರನ್ನು ನಾಟ್ಟಂಕಲ್ಲಿನ ನಿವಾಸಿ ದೀಪಾ (23) ಎಂದು ಗುರುತಿಸಲಾಗಿದೆ. ಐದು ದಿನಗಳ ಹಿಂದೆ ಪತಿಯ ಮನೆಯಲ್ಲಿ ದೀಪಾ ಇಲಿ ವಿಷ ಸೇವಿಸಿದ್ದು, ತಕ್ಷಣ ಅವರನ್ನು ಪರಿಯಾರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕೊಜ್ಹಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ದೀಪಾ ಅವರು ವೆಳ್ಳರಿಕ್ಕುಂಡು ಆನಮಂಜಳ ನಿವಾಸಿ ಸತೀಶ್ ಅವರ ಪತ್ನಿಯಾಗಿದ್ದು, ನಾಟ್ಟಂಕಲ್ಲಿನ ಕುರುವಾಟ್ ಪದ್ಮನಾಭನ್ ಮತ್ತು ಬಿಂದು ದಂಪತಿಯ ಪುತ್ರಿಯಾಗಿದ್ದಾರೆ. ಮೃತರು ಇಬ್ಬರು ಮಕ್ಕಳಾದ ಶ್ರೀದೀಪ್ತ ಹಾಗೂ ಶ್ರೀಯಾಂ ದೇವ್ ಅವರನ್ನು ಅಗಲಿದ್ದಾರೆ. ಸಹೋದರರಾದ ದೀಪು ಮತ್ತು ದಿವ್ಯ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.


