ಬೆಂಗಳೂರು: ವಿಶ್ವ ರಾಮಕ್ಷತ್ರಿಯ ಮಹಾಸಂಘ (ರಿ.) ವತಿಯಿಂದ ಡಿಸೆಂಬರ್ 20, 2026ರಂದು ಬ್ರಹ್ಮಾವರದಲ್ಲಿ ನಡೆಯಲಿರುವ ರಾಮಕ್ಷತ್ರಿಯರ ವೃತ್ತಿಪರರ ಸಮಾವೇಶದ ಪೂರ್ವಭಾವಿ ಸಭೆಯು ಆಗಸ್ಟ್ 2, 2026ರಂದು ಬೆಂಗಳೂರಿನ ವಿಜಯನಗರದ ಕದಂಬ ಸಾಮ್ರಾಟ್ ಹೋಟೆಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷ ಎಚ್. ಆರ್. ಶಶಿಧರ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಪೋಲೋ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಕೆ. ಬಿ. ಪ್ರಸಾದ್, ಮಲ್ಲಿಕ್ ಇಂಡಸ್ಟ್ರೀಸ್ನ ಇಂಜಿನಿಯರ್ ಎಂ. ಜಿ. ಲಕ್ಷ್ಮೀನಾರಾಯಣ, ಹಿರಿಯ ವಕೀಲ ಡಿ. ಕೆ. ಮಂಜುನಾಥ್, ಬೆಂಗಳೂರಿನ ಸಂಯೋಜಕ ಸುರೇಶ್ ಬಿಜುರಾರು ಹಾಗೂ ಸಮಾವೇಶದ ಅಧ್ಯಕ್ಷ ಅಶೋಕ್ ಬೆಟ್ಟಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ರಾಮಚಂದ್ರ ಗಂಗೊಳ್ಳಿ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಬಳಿಕ ಕೆ. ನಾಗರಾಜ್ ಕಾಮಧೇನು ಅವರು ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕವಾಗಿ ವಿವರಿಸಿ, ಡಿಸೆಂಬರ್ನಲ್ಲಿ ನಡೆಯಲಿರುವ ಸಮಾವೇಶದ ಮಹತ್ವವನ್ನು ಸಭೆಗೆ ತಿಳಿಸಿದರು.

ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವೃತ್ತಿಪರರು ಭಾಗವಹಿಸಿ, ಸಮಾವೇಶವನ್ನು ಯಾವ ದಿಕ್ಕಿನಲ್ಲಿ ರೂಪಿಸಬೇಕು, ಸಮಾಜಕ್ಕೆ ಇದರಿಂದಾಗುವ ಪ್ರಯೋಜನಗಳು ಹಾಗೂ ಭವಿಷ್ಯದ ಕಾರ್ಯಯೋಜನೆಗಳ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.
ಉದ್ಯಮಿಗಳಾದ ರಾಘವೇಂದ್ರ ನೇರಂಬಳ್ಳಿ (ಕದಂಬ ಗ್ರೂಪ್), ದಿನೇಶ್ ನೇರಂಬಳ್ಳಿ, ಡಿ. ಕೆ. ಗಣೇಶ್, ದಿನೇಶ್ ಕುಂದಾಪುರ ಹಾಗೂ ರವೀಂದ್ರ ಉಳ್ಳೂರು ಸೇರಿದಂತೆ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳು ಮತ್ತು ಸಲಹೆ-ಸೂಚನೆಗಳನ್ನು ಹಂಚಿಕೊಂಡರು.

ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ ಹೆಬ್ರಿ ಹಾಗೂ ಪದಾಧಿಕಾರಿಗಳಾದ ಮಂಜುನಾಥ್ ಬೈಂದೂರು ಮತ್ತು ಸಂತೋಷ್ ಹೆಬ್ರಿ, ಶ್ರೀನಿವಾಸ್ ಹೊಸನಗರ ಅವರು ಮುಖ್ಯ ಅತಿಥಿಗಳನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು.
ಸುಮಾರು 65ಕ್ಕೂ ಹೆಚ್ಚು ವೃತ್ತಿಪರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಮಾಜದ ಎಲ್ಲರೂ ಒಂದೇ ವೇದಿಕೆಯಡಿ ಒಗ್ಗೂಡಿ, ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕೈಜೋಡಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಶೋಕ್ ಬೆಟ್ಟಿನ್ ಅವರು ಸ್ವಾಗತಿಸಿದರು. ಯುವ ಸಂಘದ ಅಧ್ಯಕ್ಷ ಗಣೇಶ್ ಬಾಳಯನಮನೆ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶ್ರೀಧರ್ ಪಿ. ಎಸ್. ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.


