ಮಂಜೇಶ್ವರ: ಕಾರನ್ನು ಅಡ್ಡಗಟ್ಟಿ ಚಾಲಕನನ್ನು ಬಲವಂತವಾಗಿ ಹೊರಗಿಳಿಸಿ, ಟಾಟಾ ಟಿಯಾಗೊ ಇಲೆಕ್ಟ್ರಿಕ್ ಕಾರನ್ನು ಅಪಹರಿಸಲಾಗಿದೆ.ಕುಂಬಳೆ ಪೂಕಟ್ಟೆ ನಿವಾಸಿ ಮೊಹಮ್ಮದ್ ಸಯ್ಯದ್ ಮುಸಮ್ಮಿಲ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ದೂರುಗಾರ ಚಲಾಯಿಸುತ್ತಿದ್ದ ಕಾರನ್ನು ಖಾದರ್ ಎಂಬಾತ ಹಿಂಬಾಲಿಸಿ ಸೀತಾಂಗೋಳಿಯಲ್ಲಿ ತಡೆದು ನಿಲ್ಲಿಸಿದ್ದಾನೆ. ನಂತರ ಚಾಲಕನನ್ನು ಕೆಳಗಿಳಿಸಿ ಕಾರನ್ನು ಕೊಂಡೊಯ್ದಿದ್ದಾನೆನ್ನಲಾಗಿದೆ.

ಅಪಹರಣಗೊಂಡ ಕಾರು ಚಟ್ಟಂಚಾಲ್ಗೆ ತಲುಪಿದಾಗ ವಿದ್ಯುತ್ ಚಾರ್ಜ್ ಮುಗಿದುಹೋಗಿದೆ. ಪರಿಣಾಮವಾಗಿ ಕಾರು ಅಲ್ಲಿಯೇ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಕುಂಬಳೆ ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

