ಕುಂಬಳೆ: ಕರ್ನಾಟಕ ರಾಜರಾಜೇಶ್ವರಿ ಅವರ ನೇತೃತ್ವದಲ್ಲಿ ಕುಂಬಳೆಯಲ್ಲಿ ಹಲಸು ಮಹೋತ್ಸವಕ್ಕೆ ಚಾಲನೆ ದೊರೆಯಿತು. ಕುಂಬಳೆ ಕಣಿಪುರ ಗೋಪಾಲಕೃಷ್ಣ ಸಭಾ ಮಂಟಪದಲ್ಲಿ ಗುರುವಾರ ಬೆಳಗ್ಗೆ ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅವರು ಮಹೋತ್ಸವವನ್ನು ಉದ್ಘಾಟಿಸಿದರು.
ಇದರೊಂದಿಗೆ ನಾಡ ಆಹಾರ ಮೇಳವೂ ಆಯೋಜಿಸಲಾಗಿದ್ದು, ಮೇಳವು ಆಗಸ್ಟ್ 16ರವರೆಗೆ ನಡೆಯಲಿದೆ.



ಹಲಸಿನ ವಿವಿಧ ಖಾದ್ಯಗಳನ್ನು ಪ್ರೋತ್ಸಾಹಿಸುವುದು ಹಾಗೂ ನಾಡ ಆಹಾರ ಪದಾರ್ಥಗಳ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ನಾಲ್ಕು ದಿನಗಳ ಮೇಳವನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಸಾಂಪ್ರದಾಯಿಕ ನಾಡ ತಿಂಡಿಗಳು ಮೇಳದ ಪ್ರಮುಖ ಆಕರ್ಷಣೆಯಾಗಿವೆ.



ನಾಡ ಆಹಾರ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಸ್ಥಳೀಯರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು ಹಾಗೂ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮೇಳದ ಉದ್ದೇಶವಾಗಿದೆ ಎಂದು ಮೇಳದ ಆಯೋಜಕ ಗಣೇಶ್ ಬಿ.ಸಿ.ರೋಡ್ ತಿಳಿಸಿದ್ದಾರೆ.
ಮೇಳದಲ್ಲಿ ಹಲಸು ಹೋಳಿಗೆ, ಹಲಸು ಜಿಲೇಬಿ, ಹಲಸು ಐಸ್ಕ್ರೀಂ, ಹಲಸು ಜ್ಯೂಸ್ ಸೇರಿದಂತೆ ವಿವಿಧ ಹಲಸು ಖಾದ್ಯಗಳು ಲಭ್ಯವಿವೆ. ಇದರ ಜೊತೆಗೆ ನಾಡ ಸಾಂಬಾರ ಪದಾರ್ಥಗಳು, ಕೈಮಗ್ಗ ಸೀರೆಗಳು, ಕರಕುಶಲ ವಸ್ತುಗಳ ಪ್ರದರ್ಶನವೂ ನಡೆಯುತ್ತಿದೆ.

ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ಖಾಲಿದ್, ಪಂಚಾಯತ್ ಸದಸ್ಯರಾದ ರಮೇಶ್ ಭಟ್, ಫಸಲ್ ಪೆರಾಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


