ಮಂಗಳೂರಿನಲ್ಲಿ ಸ್ಯಾಟಲೈಟ್‌ ಫೋನ್‌ಗೆ ಉತ್ತಮ ಸ್ಪಂದನೆ

ಮಂಗಳೂರು: ಭಾರತ್‌ ಸಂಚಾರ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಇತ್ತೀಚೆಗೆ ಪರಿಚಯಿಸಿರುವ ವಿಶೇಷ ಸ್ಯಾಟಲೈಟ್‌ ಫೋನ್‌ ಸೇವೆಗೆ ಮಂಗಳೂರಿನಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬಿಎಸ್‌ಎನ್‌ಎಲ್‌ ಮಂಗಳೂರು ವಿಭಾಗದ ಮಹಾ ಪ್ರಬಂಧಕ ಹೇಮಂತ್‌ ಸದಾಶಿವ ಬೊರಲೆ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಮೊಬೈಲ್‌ ಜಾಲ, ಬ್ರಾಡ್‌ಬ್ಯಾಂಡ್‌ ಅಥವಾ ಭೂಆಧಾರಿತ ಸಂವಹನ ಸೌಲಭ್ಯಗಳಿಲ್ಲದ ಪ್ರದೇಶಗಳಲ್ಲಿಯೂ ಸ್ಯಾಟಲೈಟ್‌ ಫೋನ್‌ ಸೇವೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ದುರ್ಗಮ ಪ್ರದೇಶಗಳು, ವಿಪತ್ತು ನಿರ್ವಹಣೆ, ತುರ್ತು ಪ್ರತಿಕ್ರಿಯೆ ಹಾಗೂ ಪ್ರಮುಖ ಸಂವಹನ ಅಗತ್ಯಗಳಿಗೆ ಈ ಸೇವೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಮಂಗಳೂರಿನಲ್ಲಿ ಮುಖ್ಯವಾಗಿ ಮೀನುಗಾರಿಕೆಗೆ ತೆರಳುವವರಿಗೆ ಸ್ಯಾಟಲೈಟ್‌ ಫೋನ್‌ ಸೇವೆ ಹೆಚ್ಚಿನ ಪ್ರಯೋಜನ ನೀಡಲಿದೆ. ಈಗಾಗಲೇ 20ಕ್ಕೂ ಅಧಿಕ ಮಂದಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರಿಶೀಲನಾ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದರು.

ಭಾರತ್‌ನೆಟ್‌ ಯೋಜನೆಯಡಿ 35 ಬಿಎನ್‌ಯು ಪಾಲುದಾರರು ಬಿಎಸ್‌ಎನ್‌ಎಲ್‌ನೊಂದಿಗೆ ಮಂಗಳೂರು ವಿಭಾಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ 88 ಒಎಲ್‌ಟಿ (ಆಪ್ಟಿಕಲ್‌ ಲೈನ್‌ ಟರ್ಮಿನಲ್‌)ಗಳನ್ನು ಸ್ಥಾಪಿಸಿ, 5,000ಕ್ಕೂ ಅಧಿಕ ಎಫ್‌ಟಿಟಿಎಚ್‌ ಸಂಪರ್ಕಗಳನ್ನು ಒದಗಿಸಲಾಗಿದೆ. ಇದರಿಂದ ಸುಳ್ಯ, ಕಡಬ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಬ್ರಾಡ್‌ಬ್ಯಾಂಡ್‌ ಸೇವೆ ವಿಸ್ತರಿಸಲಾಗಿದೆ ಎಂದರು.

ಬಿಎಸ್‌ಎನ್‌ಎಲ್‌ 4ಜಿ ಜಾಲದ ವಿಸ್ತರಣೆಗೆ ಆದ್ಯತೆ ನೀಡಲಾಗುತ್ತಿದ್ದು, 4ಜಿ ಜಾಲವು ಭವಿಷ್ಯದ 5ಜಿ ಸೇವೆಗಳ ವಿಕಾಸಕ್ಕೆ ಅಡಿಪಾಯವಾಗಲಿದೆ. ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಗ್ರಾಮೀಣ ಭಾಗಗಳಲ್ಲೂ ಗುಣಮಟ್ಟದ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಮಂತ್‌ ಸದಾಶಿವ ಬೊರಲೆ ಹೇಳಿದರು.

₹1ಕ್ಕೆ ಬಿಎಸ್‌ಎನ್‌ಎಲ್‌ ಸಿಮ್‌: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಎಸ್‌ಎನ್‌ಎಲ್‌ ₹1ಕ್ಕೆ ಹೊಸ ಸಿಮ್‌ ನೀಡುವ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಆ.12ರಿಂದ ಆರಂಭಗೊಂಡಿರುವ ಈ ಕೊಡುಗೆ ಸೆ.12ರವರೆಗೆ ಜಾರಿಯಲ್ಲಿರಲಿದೆ. 24 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 1 ಜಿಬಿ ಡೇಟಾ ಹಾಗೂ 100 ಎಸ್‌ಎಂಎಸ್‌ಗಳ ಸೌಲಭ್ಯ ದೊರೆಯಲಿದೆ.

₹2,399ರ ವಾರ್ಷಿಕ ಪ್ಲಾನ್‌ ಅಡಿ 365 ದಿನಗಳ ಸೇವೆಯೊಂದಿಗೆ ಹೆಚ್ಚುವರಿಯಾಗಿ 47 ದಿನಗಳ ಅವಧಿಯನ್ನೂ ನೀಡಲಾಗುತ್ತಿದೆ. ಆ.1ರಿಂದ 90 ದಿನಗಳ ಅವಧಿಗೆ ಹೊಸ ಎಫ್‌ಟಿಟಿಎಚ್‌ ಗ್ರಾಹಕರಿಗಾಗಿ ವಿಶೇಷ ಪ್ರಚಾರಾತ್ಮಕ ಕೊಡುಗೆಯನ್ನೂ ನೀಡಲಾಗುತ್ತಿದ್ದು, ಕರ್ನಾಟಕದಲ್ಲಿ ₹499 ಎಫ್‌ಎಂಸಿ ಹೊಂದಿರುವ ಫೈಬರ್‌ ಬೇಸಿಕ್‌ ಯೋಜನೆಗೆ ಇದು ಅನ್ವಯಿಸುತ್ತದೆ. ಹೊಸ ಗ್ರಾಹಕರು ಸಂಪರ್ಕ ಪಡೆದ ಕ್ಯಾಲೆಂಡರ್‌ ತಿಂಗಳು ಸಂಪೂರ್ಣ ಉಚಿತವಾಗಿದ್ದು, ನಂತರದ ಮೊದಲ ಮೂರು ತಿಂಗಳು ಪ್ರತಿ ತಿಂಗಳು ₹100 ರಿಯಾಯಿತಿ ದೊರೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಎನ್‌ಎಲ್‌ ಮಂಗಳೂರು ವಿಭಾಗದ ಪ್ರಮುಖ ಅಧಿಕಾರಿಗಳಾದ ಕೃಷ್ಣ ಮೊಗೇರ, ವಿಜಿ ವಿ., ಮಮತಾ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!