ಮಂಜೇಶ್ವರ: ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟ ಮತ್ತು ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವುದರಲ್ಲಿಯೇ ಮಹಾತ್ಮಾ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ ಪರಿಕಲ್ಪನೆಯ ಸಾಕಾರತೆ ಅಡಗಿದೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಳ್ ತಿಳಿಸಿದರು.

ವರ್ಕಾಡಿ ಗ್ರಾಮ ಪಂಚಾಯತ್ ಆಯೋಜಿಸಿದ್ದ ದೂರು ಪರಿಹಾರ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮ ಪಂಚಾಯತ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು.ದೀರ್ಘಕಾಲದಿಂದ ಬಾಕಿಯುಳಿದಿದ್ದ ವಿವಿಧ ಅರ್ಜಿ ಹಾಗೂ ಸಾರ್ವಜನಿಕ ಸಮಸ್ಯೆಗಳ ವಿಲೇವಾರಿಗಾಗಿ ಹಮ್ಮಿಕೊಂಡ ಈ ಅದಾಲತ್ನಲ್ಲಿ 80ಕ್ಕೂ ಅಧಿಕ ದೂರುಗಳನ್ನು ಪರಿಗಣಿಸಲಾಯಿತು.



ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲುಗಳನ್ನು ಪರಿಶೀಲಿಸಿ ತ್ವರಿತ ಕ್ರಮ ಕೈಗೊಳ್ಳಲಾಯಿತು.
ಜನರು ಕಚೇರಿಗಳಿಗೆ ಅಲೆದಾಡುವುದು ತಪ್ಪಿಸಿ, ಒಂದೇ ವೇದಿಕೆಯಲ್ಲಿ ಅಧಿಕಾರಿಗಳನ್ನು ಭೇಟಿಯಾಗಲು ಇದು ಅವಕಾಶ ಕಲ್ಪಿಸಿತು. ಪಂಚಾಯತ್ ಜಂಟಿ ನಿರ್ದೇಶಕ ಹರಿದಾಸ್ ಕೆ.ವಿ., ವಿಜಿಲೆನ್ಸ್ ಅಧಿಕಾರಿ ಟಿ.ಟಿ. ಸುರೇಂದ್ರನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.ಪಂಚಾಯತ್ ಪ್ರಭಾರ ಕಾರ್ಯದರ್ಶಿ ಐತಪ್ಪ ನಾಯ್ಕ್ ಸ್ವಾಗತಿಸಿ, ವಿಬಿ ಗ್ರಾಮ್ ಜಿ ಇಂಜಿನಿಯರ್ ಸಂದೇಶ್ ವಂದಿಸಿದರು


