ಕಾಸರಗೋಡು :- ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇದರ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಇವರು ಇತ್ತೀಚೆಗೆ ಕಾಸರಗೋಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮಾಹಿನ್ ಇವರನ್ನು ಭೇಟಿಯಾಗಿ ಗಡಿನಾಡಾಗಿರುವ ಕಾಸರಗೋಡಿನಲ್ಲಿ ಸಂಚರಿಸುವ ಕೇರಳ ರಾಜ್ಯದ ಬಸ್ಸುಗಳಲ್ಲಿ ಮಲಯಾಳಂ ಜೊತೆಗೆ ಕನ್ನಡ ಭಾಷೆಯಲ್ಲಿಯೂ ನಾಮಫಲಕಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿ ಪತ್ರ ಹಸ್ತಾಂತರಿಸಿದರು. ಈ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡ ಭಾಷೆ ಮಾತನಾಡುವ ಜನರು ವಾಸಿಸುವುದರಿಂದ ಓದಲು ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿಯೂ ನಾಮಫಲಕ ಅಳವಡಿಸುವುದು ಅಗತ್ಯ ಎಂದು ಶಾಸಕರಿಗೆ ಮನದಟ್ಟು ಮಾಡಿದರು. ಪ್ರತಿಯಾಗಿ ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿರುತ್ತಾರೆ.


ಅಲ್ಲದೆ ಕಾಸರಗೋಡನ್ನು ಮೊದಲಿನಂತೆ ಕನ್ನಡ ನಾಡು ಎಂದು ಘೋಷಿಸುವುದು, ಕಾಸರಗೋಡಿನ ಎಲ್ಲಾ ನಾಮಫಲಕಗಳಲ್ಲಿ ಕನ್ನಡವನ್ನು ಅಳವಡಿಸುವುದು, ಕನ್ನಡ ಕಲಾವಿದರಿಗೆ ವಿಶೇಷ ಸ್ಥಾನಮಾನಗಳನ್ನು ನೀಡುವುದು, ಗಡಿನಾಡಿನ ಮೂಲೆ ಮೂಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಜೊತೆಗೆ ಗಡಿನಾಡ ಕನ್ನಡ ಸಾಹಿತ್ಯ ಸಂಘದ ಸಹಯೋಗದಲ್ಲಿ ಚೂರಿಪ್ಪಲ್ಲದಲ್ಲಿ ಕನ್ನಡ ಭಾಷಾ ಅಭಿವೃದ್ಧಿಗಾಗಿ ಸುಸಜ್ಜಿತ ಗ್ರಂಥಾಲಯ ರಚನೆಯ ಬೇಡಿಕೆಗಳನ್ನು
ಶಾಸಕರ ಮುಂದೆ ಇಡಲಾಯಿತು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಮಾನ್ಯ ಶಾಸಕರು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಅಚ್ಚುತ ಭಟ್, ಮವ್ವಾರ್ ಆನಂದ ಮತ್ತು ಮನ್ಸೂರ್ ಮಲ್ಲ ಜೊತೆಗಿದ್ದರು.

