ಮಂಜೇಶ್ವರ: ಕುಂಬಳೆ ಗ್ರಾಮ ಪಂಚಾಯತ್ನ ಆರಿಕ್ಕಾಡಿ ಹಾಗೂ ಶಿರಿಯ ಹೊಳೆಗಳ ಸಂಗಮ ಅಳಿವೆಬಾಗಿಲಿನಿಂದ ಅನಧಿಕೃತವಾಗಿ ಮರಳು ಸಂಗ್ರಹಿಸುವುದಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕಳೆದ 9 ವರ್ಷಗಳಿಂದ ಇಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಮರಳು ವ್ಯಾಪಾರಕ್ಕೆ ಸಂಬಂಧಿಸಿದಂತೆ ಪಂಚಾಯತ್ಗೆ ಸುಮಾರು 15 ಕೋಟಿ ರೂಪಾಯಿ ದಂಡ ಎದುರಾಗುವ ಸೂಚನೆ ಸಿಕ್ಕಿದೆ.

ಕುಂಬಳೆ ತ್ವಾಫ್ ಮಂಜಿಲ್ ಅಬ್ಬಾಸ್ ಜಾಫರ್ ಸಲ್ಲಿಸಿದ ದೂರಿನ ಮೇರೆಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಸಂಬಂಧಿತ ಇಲಾಖೆಗಳಿಂದ ಅಧಿಕೃತ ಅನುಮತಿ ಪಡೆಯುವವರೆಗೆ ಶಿರಿಯ ಹೊಳೆಯಿಂದ ಯಾವುದೇ ಮರಳು ಸಂಗ್ರಹಿಸದಂತೆ ಅಥವಾ ಸಿದ್ಧತೆ ನಡೆಸದಂತೆ ನಿರ್ದೇಶಿಸಿದೆ. ಅಲ್ಲದೆ, ಹೊಳೆಯ ಪ್ರಸ್ತುತ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಮಾಡಕೂಡದು ಎಂದು ಮುನ್ನೆಚ್ಚರಿಕೆ ನೀಡಿದೆ. ಪಂಚಾಯತ್ ಕಾರ್ಯದರ್ಶಿ ಸೇರಿದಂತೆ ಅನುಮತಿ ನೀಡಿದ ನೌಕರರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಮುಂದಿನ ತಿಂಗಳು 9ರಂದು ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.


