ಮಂಗಳೂರು:ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಆ. 23ರಂದು ಸಂಜೆ 4 ಗಂಟೆಗೆ ನಗರದ ಅಮ್ಮೆಂಬಳ್ ಸುಬ್ಬರಾವ್ ರಸ್ತೆಯ ಕೆನರಾ ಶಾಲೆಯ ಶ್ರೀ ಸುಧೀಂದ್ರ ತೀರ್ಥ ಸಭಾಗೃಹದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಕಾಮತ್ ತಿಳಿಸಿದ್ದಾರೆ.

1981ರಲ್ಲಿ ದಿವಂಗತ ಜಿ.ಜಿ. ವಾಸುದೇವ ಪ್ರಭು ಸ್ಥಾಪಿಸಿದ ಸಂಘವು ನಾಲ್ಕು ದಶಕಗಳಿಂದ ಕೊಂಕಣಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ಶ್ರಮಿಸುತ್ತಿದೆ. ಕಾರ್ಯಕ್ರಮದಲ್ಲಿ ಸಂಸ್ಥಾಪಕರ ಸಂಸ್ಮರಣಾ ದಿನವನ್ನೂ ಆಚರಿಸಲಾಗುವುದು ಎಂದರು.

ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಡಾ. ವೆಂಕಟೇಶ ನಾಯಕ್ ಹಾಗೂ ಚಂದ್ರಿಕಾ ಮಲ್ಯ ಅವರಿಗೆ ‘ಕೊಂಕಣಿ ಸಾಂಸ್ಕೃತಿಕ ರಾಯಭಾರಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಾಂತ ಶೇಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ವೆಂಕಟೇಶ ಬಾಳಿಗಾ ಮಾವಿನಕುರ್ವೆ ಸಂದೇಶ ನೀಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಮಂಜುನಾಥ ಕಾಮತ್, ಅಶೋಕ ಕಾಮತ್, ಗೀತಾ ಭಟ್, ವೆಂಕಟೇಶ ಎನ್. ಹಾಗೂ ಅರುಣ್ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.

