ಪುತ್ತೂರು: ಎಸ್ವಿಜಿ ಸಮೂಹ ಸಂಸ್ಥೆಗಳಲ್ಲಿ ಒಂದಾಗಿರುವ ಕಬಕ ಪೋಳ್ಯದಲ್ಲಿರುವ ಇನ್ಸ್ಪಿರೇಶನ್ ಪದವಿ ಪೂರ್ವ ಕಾಲೇಜಿನಲ್ಲಿ ಆ.22ರಂದು ಅಪರಾಹ್ನ 3 ಗಂಟೆಗೆ “ಪರಂಪರೆ-2026” ಪ್ರಾರಂಭೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ಜಿ ಸಮೂಹ ಸಂಸ್ಥೆಗಳ ಚೆಯರ್ಮೆನ್ ವಿಶ್ವನಾಥ ಶೇಷಾಚಲರವರು ಹೇಳಿದರು. ಆ.20ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2026ರಲ್ಲಿ ಪುತ್ತೂರಿನಲ್ಲಿ ರಿಸರ್ಚ್ ಫೋಕಸ್ ಹೊಂದಿರುವ ಇನ್ಸ್ಪಿರೇಶನ್ ಪದವಿ ಪೂರ್ವ ಕಾಲೇಜನ್ನು ಆರಂಭಿಸಿದ್ದೇವೆ.

ದಕ್ಷಿಣ ಕನ್ನಡದಲ್ಲಿ ಇರುವ ಹಲವಾರು ಪಿಯು ಕಾಲೇಜುಗಳು ಜೆಇಇ/ನೀಟ್ಗೆ ಮಾತ್ರ ಫೋಕಸ್ ಮಾಡುತ್ತಿದೆ. ಆದರೆ ಈ ಕಾಲೇಜು ಮುಖ್ಯವಾಗಿ ರಿಸರ್ಚ್ ಓರಿಯೆಂಟೆಡ್ ಕಾಲೇಜು ಆಗಿದೆ. ಮಕ್ಕಳನ್ನು ರಿಸರ್ಚ್ ಕಡೆಗೆ ಕೊಂಡೊಯ್ಯುವುದು ನಮ್ಮ ಉದ್ದೇಶವಾಗಿದೆ. ಎಸ್ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ಸಮೂಹ ಸಂಸ್ಥೆಗಳ ಅಡಿಯಲ್ಲಿ ಈಗಾಗಲೇ ಮೈಸೂರು, ಎಚ್.ಡಿ.ಕೋಟೆ, ಸಕಲೇಸಪುರ, ಬೆಂಗಳೂರು ಮುಂತಾದ ಕಡೆ ಕಾಲೇಜುಗಳು ನಡೆಯುತ್ತಿದ್ದು ಸುಮಾರು 3 ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುತ್ತದೆ ಎಂದರು. “ಪರಂಪರೆ-2026” ಪ್ರಾರಂಭೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಎಸ್ವಿಜಿ ಸೆಂಟರ್ ಆಫ್ ಎಕ್ಸಲೆನ್ಸ್ ಸಮೂಹ ಸಂಸ್ಥೆಗಳಡಿಯಲ್ಲಿನ ಕಾಲೇಜುಗಳ ಸಿಬ್ಬಂದಿಗಳ ಕರ್ತವ್ಯದ ಶ್ಲಾಘನೆಗೆ ಪ್ರಶಸ್ತಿ ಪ್ರದಾನ ಹಾಗೂ ಪೋಳ್ಯ ಇನ್ಸ್ಪಿರೇಶನ್ ಪದವಿ ಪೂರ್ವ ಕಾಲೇಜಿನ ಪ್ರಾರಂಭೋತ್ಸವ ಕಾರ್ಯಕ್ರಮ ಆಯೋಜಿಸಿದ್ದೇವೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭೋಜೇಗೌಡ, ಮೋಹನ್ ಆಳ್ವ, ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇತರ ಜಿಲ್ಲೆಗಳಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಲಿದ್ದಾರೆ. ಹೊಸ ಜನರೇಶನ್ಗಾಗಿ ಹಾಗೂ ಮುಂದಿನ ಪೀಳಿಗೆಯನ್ನು ಸಿದ್ದ ಮಾಡಲು, ಸ್ಪೆಷಾಲಿಟಿ ಜತೆಗೆ ಆರಂಭವಾದ ಕಾಲೇಜಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪೋಳ್ಯ ಇನ್ಸ್ಪಿರೇಶನ್ ಪದವಿ ಪೂರ್ವ ಕಾಲೇಜಿನ ಕೋ-ಆರ್ಡಿನೇಟರ್ ಗುರುರಾಜ್ ಉಪಸ್ಥಿತರಿದ್ದರು.


