ಮಂಜೇಶ್ವರ: ಪೊಲೀಸ್ ಕಸ್ಟಡಿಯಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ ಹಾಗೂ ನಂತರ ಕೊಲೆ ಎಂದು ದೃಢಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಕುಂಜತ್ತೂರು ಕಣ್ವತೀರ್ಥದ ಅಬ್ದುಲ್ ರಹಿಮಾನ್ ಸಿನಾನ್ (26) ಬಂಧಿತ ಆರೋಪಿ. 2024 ಮಾರ್ಚ್ನಲ್ಲಿ ಮೊಯ್ದಿನ್ ಆರಿಫ್ ಎಂಬುವವರನ್ನು ಗಲಾಟೆ ಪ್ರಕರಣದಲ್ಲಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು.

ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಆರಿಫ್ ತೀವ್ರ ಅಸ್ವಸ್ಥರಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ಸಾಬೀತುಗೊಂಡಿತ್ತು.
ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ವಿದೇಶಕ್ಕೆ ಪರಾರಿಯಾಗಿ ವಾಪಸ್ಸಾಗುತ್ತಿದ್ದ ಸಿನಾನ್ನನ್ನು ಎಮಿಗ್ರೇಶನ್ ಅಧಿಕಾರಿಗಳ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ.

