ಸಡಗರ-ಸಂಭ್ರಮದಿಂದ ಜರಗಿದ ಈದ್ ಮಿಲಾದ್ ಆಚರಣೆ: ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಬೃಹತ್ ಮೆರವಣಿಗೆ

​ಮಂಜೇಶ್ವರ: ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ‘ಈದ್ ಮಿಲಾದ್’ ಹಬ್ಬವನ್ನು ಮಂಜೇಶ್ವರ ತಾಲೂಕಿನಾದ್ಯಂತ ಮಂಗಳವಾರದಂದು ಅತ್ಯಂತ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಈದ್ ಮಿಲಾದ್ ಪ್ರಯುಕ್ತ ವಿಶೇಷ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.

ಮಸೀದಿ ಅಧ್ಯಕ್ಷರಾದ ಸಯ್ಯದ್ ಯು.ಕೆ. ಸೈಪುಲ್ಲಾ ತಂಘಲ್, ಕಾರ್ಯದರ್ಶಿ ಇಬ್ರಾಹಿಂ ಬಟರ್‌ಫ್ಲೈ, ಪ್ರಮುಖರಾದ ಎಸ್.ಎಂ. ಬಶೀರ್, ಇಬ್ರಾಹಿಂ ಉಮ್ಮರ್ ಹಾಜಿ ಸೇರಿದಂತೆ ಹಲವು ಗಣ್ಯರು ಹಾಗೂ ಧಾರ್ಮಿಕ ನೇತಾರರು ಮೆರವಣಿಗೆಗೆ ಚಾಲನೆ ನೀಡಿ, ನೇತೃತ್ವ ವಹಿಸಿದರು.

​ ನೂರಾರು ಮದ್ರಸ ವಿದ್ಯಾರ್ಥಿಗಳು ಹಾಗೂ ಯುವಕರು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಒಗ್ಗೂಡಿ ಹೆಜ್ಜೆ ಹಾಕಿದರು.
​ ಮೆರವಣಿಗೆಯಲ್ಲಿ ಸಾಗಿದ ಸಾರ್ವಜನಿಕರಿಗೆ ಅಲ್ಲಲ್ಲಿ ಸಿಹಿ ತಿನಿಸು ಹಾಗೂ ಮಧುರ ಪಾನೀಯಗಳನ್ನು ವಿತರಿಸುವ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸವನ್ನು ಹಂಚಿಕೊಳ್ಳಲಾಯಿತು.


​ ಉದ್ಯಾವರ ಮಾತ್ರವಲ್ಲದೆ, ಕುಂಜತ್ತೂರು, ಪೊಸೋಟು, ಬಂಗ್ರ ಮಂಜೇಶ್ವರ, ಉಪ್ಪಳ ಸೇರಿದಂತೆ ಮಂಜೇಶ್ವರ ತಾಲೂಕಿನ ವಿವಿಧ ಮೊಹಲ್ಲಾ ಹಾಗೂ ಮಸೀದಿಗಳ ವ್ಯಾಪ್ತಿಯಲ್ಲೂ ಈದ್ ಮಿಲಾದ್ ಅನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳು, ಪ್ರವಾದಿಗಳ ಜೀವನ ಸಂದೇಶಗಳ ಕುರಿತು ಧಾರ್ಮಿಕ ಉಪನ್ಯಾಸಗಳು ಜರುಗಿದವು.

​ಶಾಂತಿ, ಕರುಣೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಜನರಿಗೆ ನೆನಪಿಸುವ ಮೂಲಕ ಈ ಬಾರಿಯ ಈದ್ ಮಿಲಾದ್ ಆಚರಣೆಯು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!