ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘ, ರಜಕ ಯತ್, ಮಹಿಳಾ ಘಟಕ ಕುಡ್ಲ ಹಾಗೂ ಸರ್ವ ತಾಲೂಕು ಸಂಘಗಳ ಆಶ್ರಯದಲ್ಲಿ, ಸೇವಾ ಬ್ರಿಗೇಡ್ ಗುರುಪುರದ ಸಹಕಾರದೊಂದಿಗೆ ಮಡಿವಾಳ ಸಮಾಜದವರಿಗಾಗಿ ಆಯೋಜಿಸಿದ್ದ ‘ಕೆಸರ್ ದ ಕಂಡಡೊಂಜಿ ದಿನ’ ಕಾರ್ಯಕ್ರಮವು ಆಗಸ್ಟ್ 23ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ದೈವಸ್ಥಾನದ ಬಂಡಿಗದ್ದೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಮೋಹನ ಅಳಪೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಮಾರ್ಗದರ್ಶಕ ಪ್ರಕಾಶ್ ಬಿ.ಎನ್., ದೋಣಿಂಜೆಗುತ್ತಿನ ಪ್ರಧಾನ ಗಡಿಕಾರ ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು, ಮಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ಆಡಳಿತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು, ದೈವಸ್ಥಾನದ ದರ್ಶನ ಪಾತ್ರಿಗಳಾದ ಚಂದ್ರಹಾಸ ಕೌಡೂರು, ಉದ್ಯಮಿಗಳಾದ ಡಾ. ಸರಳಾ ಆರ್., ಸದಾನಂದ ಪುತ್ರನ್, ರಾಮಕೃಷ್ಣ ವಾಮಂಜೂರು, ಮೆಸ್ಕಾಂ ಅಧಿಕಾರಿ ಗಣೇಶ್ ಕುಂದರ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ನಿತ್ಯಾನಂದ ಸ್ವಾಮೀಜಿ ಧರ್ಮದರ್ಶಿ ಹಾಗೂ ಉದ್ಯಮಿ ವಿಜಯ್ ಶೆಟ್ಟಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಅಂಗವಾಗಿ ಕೆಸರು ಗದ್ದೆಯಲ್ಲಿ ಮಡಿವಾಳ ಸಮಾಜದ ಸದಸ್ಯರಿಗೆ ವಿವಿಧ ಮನರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳು ಉತ್ಸಾಹಭರಿತವಾಗಿ ನಡೆದವು. ಸಮಾಜದ ಪುರುಷರು, ಮಹಿಳೆಯರು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು.


ಇದೇ ಸಂದರ್ಭದಲ್ಲಿ ‘ತುಳುನಾಡ ವೈಭವ’ ವಿಷಯದಡಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಕಾರ್ಯಕ್ರಮವು ಸಮಾಜದ ಒಗ್ಗಟ್ಟು, ಸೌಹಾರ್ದತೆ ಹಾಗೂ ಪರಂಪರೆಯನ್ನು ಬಲಪಡಿಸುವ ಜೊತೆಗೆ ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ರಾಕೇಶ್ ಪಚ್ಚನಾಡಿ ಹಾಗೂ ದೀಕ್ಷಿತ ರಾಕೇಶ್ ಪಚ್ಚನಾಡಿ ನೆರವೇರಿಸಿದರು.

