ಕಾಸರಗೋಡು: MSF ಜಿಲ್ಲಾ ನೇತೃತ್ವದಲ್ಲಿ ಭಿನ್ನಾಭಿಪ್ರಾಯಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಖಜಾಂಚಿ ಸರಾಫ್ರಾಜ್ ಬಂದಿಯೋಡ್ , ಉಪಾಧ್ಯಕ್ಷರಾದ ಜಂಶೀರ್ ಮೊಗ್ರಾಲ್, ಮುರ್ಷಿದ್ ಮೊಗ್ರಾಲ್, ಕಾರ್ಯದರ್ಶಿಗಳಾದ ಬಿಲಾಲ್ ಆರಿಕ್ಕಾಡಿ ಹಾಗೂ ಅನ್ಸಾರ್ ವರ್ಕಾಡಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

MSF ರಾಜ್ಯ ಸಮಿತಿಗೆ ಜಿಲ್ಲಾ ಪ್ರತಿನಿಧಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಜಿಲ್ಲಾ ಕೌನ್ಸಿಲ್ನ ನಿರ್ಧಾರಗಳನ್ನು ಕಡೆಗಣಿಸಿ ಜಿಲ್ಲಾ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜೀನಾಮೆ ನೀಡಿದವರು ಆರೋಪಿಸಿದ್ದಾರೆ.
ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಅಂಗಡಿಮೊಗರು ಅವರ ಹೆಸರನ್ನು ಜಿಲ್ಲಾ ಕೌನ್ಸಿಲ್ನ ನಿರ್ಧಾರವನ್ನು ನಿರ್ಲಕ್ಷಿಸಿ ಕೈಬಿಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಲ್ಲಾ ಪದಾಧಿಕಾರಿಗಳೊಂದಿಗೆ ಅಗತ್ಯ ಸಮಾಲೋಚನೆ ನಡೆಸದೆ ಹಾಗೂ ಸಾಮೂಹಿಕ ಚರ್ಚೆಗಳನ್ನು ಬದಿಗೊತ್ತಿ ಸಂಘಟನಾ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಪ್ರಸ್ತುತ ನೇತೃತ್ವದ ಕ್ರಮವನ್ನು ವಿರೋಧಿಸಿ ರಾಜೀನಾಮೆ ನೀಡಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಘಟನೆಯ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಾಗೂ ಕೌನ್ಸಿಲ್ ನಿರ್ಧಾರಗಳನ್ನು ಮೀರಿ ಏಕಪಕ್ಷೀಯವಾಗಿ ಮುನ್ನಡೆಯುತ್ತಿರುವ ನೇತೃತ್ವದೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬ ನಿಲುವಿನಿಂದ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯಗಳಿಗೆ ಆದ್ಯತೆ ನೀಡುವ ಪ್ರಜಾಸತ್ತಾತ್ಮಕ ಕಾರ್ಯವೈಖರಿಯನ್ನು ಪುನಃಸ್ಥಾಪಿಸಬೇಕು ಎಂದು ರಾಜೀನಾಮೆ ನೀಡಿದವರು ಆಗ್ರಹಿಸಿದ್ದಾರೆ.
ಒಂದೇ ಸಂದರ್ಭದಲ್ಲಿ ಐವರು ಪ್ರಮುಖ ಜಿಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡಿರುವುದು MSF ಜಿಲ್ಲಾ ಘಟಕದಲ್ಲಿ ದೊಡ್ಡ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ.


