ಎರಡನೇ ವರ್ಷದ ‘ರೋಟರಿ ಕಂಬಳ’ ಸಿದ್ಧಕಟ್ಟೆ ಕೊಡಂಗೆ ವೀರ -ವಿಕ್ರಮ ಜೋಡುಕರೆಯಲ್ಲಿ ಅ.12ರಂದು

ಬಂಟ್ವಾಳ: ಕಳೆದ ವರ್ಷ ರೋಟರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ‘ರೋಟರಿ ಕಂಬಳ’ ಕೂಟ ನಡೆಸಿ ಗಮನ ಸೆಳೆದಿದ್ದ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಈ ಬಾರಿ ಇತರ ನಾಲ್ಕು ರೋಟರಿ ಕ್ಲಬ್ ಗಳ ಸಹಭಾಗಿತ್ವದಲ್ಲಿ ಸಿದ್ಧಕಟ್ಟೆ ಕೊಡಂಗೆ ವೀರ -ವಿಕ್ರಮ ಜೋಡುಕರೆಯಲ್ಲಿ ಅ.12ರಂದು ಎರಡನೇ ವರ್ಷದ ‘ರೋಟರಿ ಕಂಬಳ’ ನಡೆಸಲು ಮುಂದಾಗಿದೆ ಎಂದು ಈ ಕಂಬಳ ಕೂಟದ ನೇತೃತ್ವ ವಹಿಸಿಕೊಂಡಿರುವ ಮೊಡಂಕಾಪು ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಎಲ್ಯಾಸ್ ಸ್ಯಾಂಕ್ಟಿಸ್ ಹೇಳಿದ್ದಾರೆ.


ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಈ ಬಾರಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಜೊತೆಗೆ ಬಂಟ್ವಾಳ , ಮೊಡಂಕಾಪು, ಸಿದ್ದಕಟ್ಟೆ ಫಲ್ಗುಣಿ, ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಅದ್ದೂರಿ ಕಂಬಳ ನಡೆಯುತ್ತಿದೆ’. ‘ಅಂದು ಬೆಳಿಗ್ಗೆ ಗಂಟೆ 8.30ಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಅಧ್ಯಕ್ಷತೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಕಂಬಳ ಕರೆ ಉದ್ಘಾಟಿಸುವರು. ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಕಂಬಳ ಕೂಟಕ್ಕೆ ಚಾಲನೆ ನೀಡುವರು’ ಎಂದರು.

ಇದೇ ವೇಳೆ ಜಿಲ್ಲಾ ರೋಟರಿ ಮಾಜಿ ಗವರ್ನರ್ ಎನ್.ಪ್ರಕಾಶ ಕಾರಂತ್ ಸಹಿತ ವಿವಿಧ ನಾಯಕರು ಭಾಗವಹಿಸಲಿದ್ದು, ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಬಹುಮಾನ ವಿತರಿಸುವರು. ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎಮರ್ಾಳ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಜಿಲ್ಲಾ ಕಾರ್ಯದಶರ್ಿ ಲೋಕೇಶ ಶೆಟ್ಟಿ ಮುಚ್ಚೂರು, ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತಿತರ ಗಣ್ಯರು ಭಾಗವಹಿಸುವರು. ಈ ಕಂಬಳ ಕೂಟದಲ್ಲಿ ಸುಮಾರು 150ಕ್ಕೂ ಮಿಕ್ಕಿ ಜೋಡಿ ಹಗ್ಗ ಕಿರಿಯ, ನೇಗಿಲು ಕಿರಿಯ ಮತ್ತು ಸಬ್ ಜ್ಯೂನಿಯರ್ ಕೋಣಗಳು ಭಾಗವಹಿಸಲಿದೆ ಎಂದು ಅವರು ತಿಳಿಸಿದರು.


‘ಕಳೆದ 1905ರಲ್ಲಿ ಅಮೇರಿಕಾದಲ್ಲಿ ಸ್ಥಾಪನೆಗೊಂಡ ರೋಟರಿ ಕ್ಲಬ್ ಪ್ರಸಕ್ತ ಒಟ್ಟು 220 ದೇಶಗಳಲ್ಲಿ ಸುಮಾರು 35 ಸಾವಿರ ಕ್ಲಬ್ ಮತ್ತು ಸುಮಾರು 12ಲಕ್ಷ ಸದಸ್ಯರನ್ನು ಹೊಂದಿದೆ. ಕೇವಲ ನಗರ ಪ್ರದೇಶಕ್ಕೆ ಸೀಮಿತಗೊಂಡಿದ್ದ ರೋಟರಿ ಕ್ಲಬ್ ಜನಸೇವೆ ಮತ್ತು ರೋಟರಿ ಕಂಬಳದ ಮೂಲಕ ಗ್ರಾಮೀಣ ಕೃಷಿಕರ ಬಳಿ ತೆರಳಿ ಅವರ ವಿಶ್ವಾಸ ಗಳಿಸುವುದರ ಜೊತೆಗೆ ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆ ಹಾಗೂ ಸಾವಯವ ಕೃಷಿ ಮತ್ತಿತರ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ಪ್ರಯತ್ನ ನಡೆಸುತ್ತಿದೆ’ ಎಂದು ಅವರು ವಿವರಿಸಿದರು.


ಲೊರೆಟ್ಟೋ ಹಿಲ್ಸ್ ಕ್ಲಬ್ಬಿನ ಅಧ್ಯಕ್ಷ ವಿಜಯ ಫೆನರ್ಾಂಡಿಸ್ ಮಾತನಾಡಿ, ‘ಪ್ರತೀ ವರ್ಷ ಎಲ್ಲಾ ರೋಟರಿ ಕ್ಲಬ್ ತಲಾ ರೂ 20 ಲಕ್ಷಕ್ಕೂ ಮಿಕ್ಕಿ ಮೊತ್ತವನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಗೆ ವಿನಿಯೋಗಿಸುತ್ತಿದೆ’ ಎಂದರು. ಕ್ಲಬ್ಬಿನ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ‘ಸಬ್ ಜ್ಯೂನಿಯರ್ ವಿಭಾಗದಲ್ಲಿ ‘ರೋಟರಿ ಕಂಬಳ’ ಆಯೋಜನೆ ಬಳಿಕ ಸಾವಯವ ಕೃಷಿ ಮತ್ತು ಕೋಣಗಳನ್ನು ಸಾಕುವ ರೈತರ ಸಂಖ್ಯೆ ಹೆಚ್ಚಳಗೊಂಡಿದೆ’ ಎಂದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ನಾಯಕ ನಾರಾಯಣ ಹೆಗ್ಡೆ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆನಾರ್ಂಡಿಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!