ಮಂಜೇಶ್ವರ: ಪೀಸ್ ಕ್ರಿಯೇಟಿವ್ ಕುಂಜತ್ತೂರು ಹಾಗೂ ಹೊಸಂಗಡಿ ಶಾಲೆಗಳಲ್ಲಿ ಅದ್ದೂರಿಯಾಗಿ ಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಆಯೋಜಿಸಲಾಗಿದ್ದು, ಶಾಲಾ ಪರಿಸರವು ಹಬ್ಬದ ಸಂಭ್ರಮದಿಂದ ಕಂಗೊಳಿಸಿತು. ಬೆಳಗಿನ ನಸುಕುದಿಂದಲೇ ವಿದ್ಯಾರ್ಥಿಗಳ ಹರ್ಷೋದ್ಗಾರ, ಬಣ್ಣಬಣ್ಣದ ಧ್ವಜಗಳು ಮತ್ತು ಕ್ರೀಡಾಂಗಣದ ಸಜ್ಜು ಎಲ್ಲರ ಗಮನ ಸೆಳೆಯುವಂತಿತ್ತು.
ಶಾಲಾ ಚೇಯರ್ಮ್ಯಾನ್ ಹಾಜಿ ಅಬ್ದುಲ್ ರಹ್ಮಾನ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದ ಶುಭಾರಂಭವು ಭವ್ಯ ಮೆರವಣಿಗೆಯಿಂದ ಜರುಗಿತು. ವಿದ್ಯಾರ್ಥಿಗಳು ತಮ್ಮ ತಮ್ಮ ಹೌಸ್ಗಳ ವಿಶಿಷ್ಟ ವೇಷಭೂಷಣ ಮತ್ತು ಸಿಂಕ್ರೊನೈಸ್ ಪಥಸಂಚಲನದಿಂದ ಕಾಣಿಸಿಕೊಳ್ಳುತ್ತ, ಕ್ರೀಡಾಸ್ಪೂರ್ತಿಯ ಅರ್ಥವನ್ನು ಪರಿಣಾಮಕಾರಿಯಾಗಿ ತೋರಿಸಿದರು.
ಬಳಿಕ ವಿವಿಧ ವಯೋಮಾನದ ವಿದ್ಯಾರ್ಥಿಗಳು ವಿರಾಮವಿಲ್ಲದ ಆಸಕ್ತಿದಾಯಕ ಸ್ಪರ್ಧೆಗಳಲ್ಲಿ ತಾವುತಮ್ಮ ಸಾಮರ್ಥ್ಯವನ್ನು ಮೆರೆದರು. 100 ಮೀ., 200 ಮೀ. ಓಟ, ರಿಲೇ ರೇಸ್, ಲಾಂಗ್ ಜಂಪ್, ಶಾಟ್ಪುಟ್ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳು ಕ್ರೀಡಾಂಗಣಕ್ಕೆ ಚೈತನ್ಯ ತುಂಬಿದವು. ಪ್ರತಿ ಕ್ರೀಡಾಂಗಣದಲ್ಲಿ ಉತ್ಸಾಹ, ಸ್ಪರ್ಧಾತ್ಮಕ ಮನೋಭಾವ ಮತ್ತು ತಂಡ ಸಹಕಾರದ ಸ್ಫೂರ್ತಿಯು ಅನಾವರಣಗೊಂಡಿತು. ಅಭಿಮಾನಿಗಳು, ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಕ್ರೀಡೋತ್ಸವಕ್ಕೆ ವಿಶಿಷ್ಟ ಮೆರಗು ನೀಡಿದರು.
ಕೊನೆಯಲ್ಲಿ ವಿಜೇತರಿಗೆ ಪದಕಗಳು ಹಾಗೂ ಗೌರವ ಪತ್ರಗಳನ್ನು ನೀಡಲಾಗಿದ್ದು, ಎಲ್ಲರ ಮುಖದಲ್ಲೂ ಸಾಧನೆ ಹಾಗೂ ಸಂತೋಷದ ಕಿರಣ ಹೊಳೆಯಿತು.ಅದೇ ರೀತಿ ವಿಶೇಷ ತರಬೇತುದಾರರಾಗಿ ಆಗಮಿಸಿದ ಸಕೀಂ, ರಿಲ್ವಾನ್, ಶಾಝಿಲ್ ಹಾಗೂ ರೈಫಾನ್ ನವರನ್ನು ಸ್ಮರಣಿಕೆ ಹಾಗೂ ಕ್ಯಾಶ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಸಕ್ರಿಯ ಕ್ರೀಡಾಂಗಣ, ಸಂಭ್ರಮಭರಿತ ವಾತಾವರಣ ಮತ್ತು ವಿದ್ಯಾರ್ಥಿಗಳ ಮೆರೆದ ಕೌಶಲ್ಯದಿಂದ ಕಂಗೊಳಿಸುವ ದೃಶ್ಯ ಕಂಡು ಬಂತು. ಕೋರ್ಡಿನೇಟರುಗಳಾದ ಆಯಿಷಾ , ಅನೂದ್, ಖೈರುನ್ನಿಸಾ, ರೋಶ್ನಿ ಹಾಗೂ ರಶೀದ ಹಾಗೂ ಅಧ್ಯಾಪಕರುಗಳು ನೇತೃತ್ವ ನೀಡಿದರು.