ಇ-ಖಾತಾ ಸಮಸ್ಯೆ ಕಾಂಗ್ರೆಸ್ ಕೃಪಾಪೋಷಿತ ಗ್ಯಾರಂಟಿ :- ಶಾಸಕ ಕಾಮತ್

ಮ.ನ.ಪಾ. ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಇನ್ನೂ ಸಹ ಜನರು ಹರಸಾಹಸ ಪಡುವಂತಾಗಿದ್ದು ದಪ್ಪ ಚರ್ಮದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈ ಬಗ್ಗೆ ಚಿಂತೆಯೇ ಇಲ್ಲವಾಗಿರುವುದು ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರವು ಅವೈಜ್ಞಾನಿಕವಾಗಿ ಆಸ್ತಿ ನೋಂದಣಿಗೆ ಇ–ಖಾತಾ ಕಡ್ಡಾಯ ಮಾಡಿದ ದಿನದಿಂದಲೂ ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆ ಉಂಟಾಗಿದೆ. ದೂರದ ಊರುಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಖರೀದಿದಾರರು, ಮಾರಾಟಗಾರರು ಇಲ್ಲಿಗೆ ಬಂದು ಹಲವು ದಿನಗಳ ನಂತರವೂ ತಮ್ಮ ಕೆಲಸವಾಗದೇ ಬರಿಗೈಯಲ್ಲಿ ಮರಳುತ್ತಿದ್ದಾರೆ. ಮೊನ್ನೆ ಇದೇ ರೀತಿ ಪರಿಸ್ಥಿತಿ ಎದುರಿಸಿದ ವ್ಯಕ್ತಿಯೋರ್ವರು ವಿದೇಶಕ್ಕೆ ತೆರಳುವ ಮುನ್ನ ಇಂತಹ ಅವ್ಯವಸ್ಥೆಯನ್ನು ನಾನು ಹಿಂದೆಂದೂ ಕಂಡಿಲ್ಲವೆಂದು ತೀವ್ರ ಹತಾಶೆ ವ್ಯಕ್ತಪಡಿಸಿ ಹೋಗಿದ್ದಾರೆ. ಇವೆಲ್ಲದರ ಬಗ್ಗೆ ನಾನೇ ಖುದ್ದಾಗಿ ಅಧಿಕಾರಿಗಳ, ಕಂದಾಯ ಸಚಿವರ ಕೊನೆಗೆ ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೆ. ಆದರೂ ಫಲಿತಾಂಶ ಮಾತ್ರ ಶೂನ್ಯವೆಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅರ್ಜಿ ಸಲ್ಲಿಸಿದ ಒಂದು ವಾರದಿಂದ 20 ದಿನಗಳೊಳಗಾಗಿ ಇ-ಖಾತಾ ನೀಡಲು ಕ್ರಮವಹಿಸಲಾಗಿತ್ತು. ಕಾಲಕಾಲಕ್ಕೆ ಅಧಿಕಾರಿಗಳ ಸಭೆ ಕರೆದು ಜನರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸೂಚನೆ ನೀಡಲಾಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ಅಸ್ತವ್ಯಸ್ತವಾಗಿದ್ದು ಜನಸಾಮಾನ್ಯರು ಹಿಡಿ ಶಾಪ ಹಾಕುವಂತಾಗಿದೆ. ಯಾವುದೇ ತಾಂತ್ರಿಕ ದೋಷಗಳಿದ್ದರೂ ಅದನ್ನು ಬಗೆಹರಿಸಲು ವರ್ಷಗಟ್ಟಲೆ ಸಮಯ ಬೇಕಾ? ಜನ ಸಾಮಾನ್ಯರನ್ನು ಸರಕಾರಿ ಕಚೇರಿಗಳಿಗೆ ಅಲೆದಾಡಿಸುವುದು ಸರಿಯಲ್ಲ. ಜನರು ಬೀದಿಗಿಳಿಯುವ ಮುನ್ನ ಇ-ಖಾತಾ ಸಮಸ್ಯೆಯನ್ನು ಬಗೆಹರಿಸಿ ಎಂದು ಶಾಸಕರು ಸರ್ಕಾರಕ್ಕೆ ಎಚ್ಚರಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!