ಅಬ್ಬಕ್ಕ @ 500 ರಾಷ್ಟ್ರೀಯ ವಿಚಾರ ಸಂಕೀರ್ಣಕ್ಕೆ 100ರ ಸಂಭ್ರಮ

ಮಂಗಳೂರು: ಭಾರತ ಉತ್ಕೃಷ್ಟ ಕ್ಷಾತ್ರ ಪರಂಪರೆಯನ್ನು ಹೊಂದಿರುವ ಮಹಾನ್ ರಾಷ್ಟ್ರ. ಪುರುಷರು ಮಹಿಳೆಯರಾದಿಯಾಗಿ ಅನೇಕರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿದಾನ ನೀಡಿದ್ದಾರೆ. ಅದೆಷ್ಟೋ ವೀರಗಾಥೆ ಇತಿಹಾಸದ ಪುಟಗಳಲ್ಲಿ ಅಳಿದು ಹೋಗಿದೆ. ಇನ್ನೊಂದಷ್ಟು ವಿಚಾರಗಳು ಬಲವಂತಕ್ಕೆ ಮಣಿದು ತೆರೆಮರೆಗೆ ಸರಿಸಲ್ಪಟ್ಟಿವೆ. ಅಂತಹ ಪರಂಪರೆಯಲ್ಲಿ ಕ್ಷಾತ್ರ ತೇಜದಲ್ಲಿ ಹೊಳೆಯಬೇಕಾಗಿದ್ದ ಮಹಿಳೆಯರದ್ದೂ ಸೇರಿಕೊಂಡಿದೆ ಅನ್ನುವುದು ದುರಂತ. ಹೆಣ್ಣನ್ನು ಅಬಲೆ, ಶೋಷಿತೆ ಎಂದು ನಮ್ಮ ಇತಿಹಾಸ ಪುಸ್ತಕಗಳು ಬಿಂಬಿಸಿದ್ದೇ ಹೆಚ್ಚು. ಆದರೆ ನಿಜವಾದ ಭಾರತದ ಇತಿಹಾಸವನ್ನು ಗಮನಿಸಿದರೆ ಅಲ್ಲಿ ಅಪ್ರತಿಮ ಧೈರ್ಯ, ಶೌರ್ಯ, ತ್ಯಾಗ ಮತ್ತು ಬುದ್ಧಿಮತ್ತೆಯನ್ನು ಮೆರೆದ ಅನೇಕ ವೀರ ಮಹಿಳೆಯರು ದೇಶಭಕ್ತಿಯ ಅತ್ಯುತ್ತಮ ನಿದರ್ಶನ ನೀಡಿರುವುದನ್ನು ಗಮನಿಸಬಹುದು. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಓನಕೆ ಓಬವ್ವ, ರಾಣಿ ದುರ್ಗಾವತಿ ಮೊದಲಾದವರು ಪರಕೀಯರ ವಿರುದ್ಧ ಮತ್ತು ಅನ್ಯಾಯದ ವಿರುದ್ಧ ಹೋರಾಡಿ, ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ.

ಭವ್ಯ ಭಾರತದ ಕನಸು ನನಸಾಗಬೇಕಾದರೆ ಅಳಿದು ಹೋಗುವುತ್ತಿರುವುದನ್ನು ಕೆದಕ ಬೇಕು. ಮರೆತು ಹೋಗುತ್ತಿರುವುದನ್ನು ನೆನಪಿಸಿಕೊಳ್ಳಬೇಕು ಅಂತಹ ಒಂದು ಅದ್ಭುತ ಪ್ರಯತ್ನ ಸಹಕಾರಗೊಂಡದ್ದು ಅಬ್ಬಕ್ಕ @ 500 ರಾಷ್ಟ್ರೀಯ ವಿಚಾರ ಸಂಕೀರ್ಣದ ಸರಣಿ ಕಾರ್ಯಕ್ರಮದಲ್ಲಿ. ಕಡಲತಡಿಯ ಅಭಯ ರಾಣಿಯೆಂದೇ ಖ್ಯಾತಿ ಪಡೆದ ನಮ್ಮ ತುಳುನಾಡಿನ ವೀರರಾಣಿ ಅಬ್ಬಕ್ಕಳ ಬಗ್ಗೆ ವಿದ್ಯಾರ್ಥಿ ದೆಶೆಯಲ್ಲಿ ಓದಿದ ನೆನಪುಗಳು ನನ್ನಲಿಲ್ಲ. ಆದರೆ ಆ ಮಹಾನ್ ಚೇತನದ 500ನೇ ಜನ್ಮ ಶತಾಬ್ದಿಯ ಅಂಗವಾಗಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ವಿಭಾಗವು 99 ಸರಣಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಇದೇ ದಿನಾಂಕ 16ನೇ ಸೋಮವಾರದಂದು ಪುತ್ತೂರಿನ ವಿವೇಕಾನಂದ ಕಾಲೇಜು ಆವರಣದಲ್ಲಿ ಶತಕದ ಸಂಭ್ರಮಾಚರಣೆಯೊಂದಿಗೆ ಐತಿಹಾಸಿಕ ತೆರೆಗೆ ನಾಂದಿಯಾಡಲಿದೆ. ಈ ಮೂಲಕ ಪೋರ್ಚುಗೀಸರ ವಿರುದ್ಧ ಸಿಡಿದೆದ್ದ ಭಾರತದ ಮೊದಲ ಮಹಿಳಾ ಸ್ವತಂತ್ರ ಸೇನಾನಿ ಸಿಂಹಿಣಿಯನ್ನು ಎಲ್ಲರ ಮನೆ ಮನಸ್ಸುಗಳಿಗೆ ತಲುಪಿಸುವ ಕಾರ್ಯವನ್ನು ಅದ್ಭುತವಾಗಿ ನೆರವೇರಿಸಿಕೊಟ್ಟ ಸಂಸ್ಥೆಗೆ ಹೃತ್ಪೂರ್ವಕ ಅಭಿನಂದನೆಗಳು.

ರಾಣಿ ಅಬ್ಬಕ್ಕಳ ಕುರಿತಾದ ಸರಣಿ ಕಾರ್ಯಕ್ರಮ ಅತ್ಯಂತ ರೋಚಕವಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. 15ನೇ ಕಾರ್ಯಕ್ರಮದಲ್ಲಿ ಪ್ರಕಾಶ್ ಮಲ್ಪೆ ಅವರ ‘ರಾಣಿ ಅಬ್ಬಕ್ಕ’ ತಂತ್ರಜ್ಞಾನದಿಂದ ನಿರ್ಮಿಸಿದ ಸಾಕ್ಷಾ ಚಿತ್ರದ ಬಿಡುಗಡೆ, 25ನೇ ಕಾರ್ಯಕ್ರಮ ಕುತ್ತಾರು ಬಾಲ ಸಂರಕ್ಷಣಾ ಕೇಂದ್ರದಲ್ಲಿ ತೋನ್ಸೆ ಪುಷ್ಕಳ್ ಕುಮಾರ್ ಅವರ ಹರಿ ಸಂಕೀರ್ತನ ಕಾರ್ಯಕ್ರಮ, 50ನೇ ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಕಾಲೇಜಿನ ಸುಮಾರು 900 ಮಕ್ಕಳ ಸಮ್ಮುಖದಲ್ಲಿ ನಡೆಯಿತು, 75ನೇ ಕಾರ್ಯಕ್ರಮವು ಕೆನರಾ ಕಾಲೇಜಿನಲ್ಲಿ ಅಷ್ಟಾವಧಾನದ ಮೂಲಕ ನಡೆಯಿತು, 89 ರಿಂದ 94ರ ವರೆಗಿನ ಕಾರ್ಯಕ್ರಮ ಮಡಿಕೇರಿಯಲ್ಲಿ ಸಂಪನ್ನಗೊಂಡಿತು, 99ನೇ ಕಾರ್ಯಕ್ರಮ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು ಇಲ್ಲಿ ಅಬ್ಬಕ್ಕನ ಕುರಿತಾಗಿ ಸಂಶೋಧನೆಯನ್ನು ಮಾಡಿದ ಆರು ಮಂದಿ ಹಿರಿಯರಿಗೆ ಗೌರವ ಸಮರ್ಪಿಸಲಾಯಿತು, ಇದೀಗ 100ನೇ ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜನೆಯಾಗಿದೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ವಿಭಾಗ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು ಇದರ ಇತಿಹಾಸ
ವಿಭಾಗ ಮತ್ತು ಐಕ್ಯೂಎಸಿದ ಸಹಯೋಗದೊಂದಿಗೆ ಫೆಬ್ರವರಿ 16 ನೇ ಸೋಮವಾರದಂದು ಪುತ್ತೂರು ನೆಹರುನಗರದ ವಿವೇಕಾನಂದ ಕಾಲೇಜಿನಲ್ಲಿ ಅಬ್ಬಕ್ಕ@ 500 ರಾಷ್ಟ್ರೀಯ ವಿಚಾರ ಸಂಕೀರ್ಣ ಶತಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕುಲದೀಪ್ ಎಂ ಚೌಟ ಹಾಗೆಯೇ ಗುಂಟ ಲಕ್ಷ್ಮಣ್, ಮುರಳಿಕೃಷ್ಣ ಕೆ ಎನ್, ಗುರುನಾಥ್ ಬಡಿಗೇರ ಪಾಲ್ಗೊಳ್ಳಲಿದ್ದಾರೆ.

ನಂತರದಲ್ಲಿ ರವೀಂದ್ರ ಪಿ ಇವರ ಅಧ್ಯಕ್ಷತೆಯಲ್ಲಿ ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ ಗೋಷ್ಠಿಯಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೆಯೇ ಡಾ. ಯಶೋದಾ ರಾಮಚಂದ್ರ ಅಧ್ಯಕ್ಷತೆಯಲ್ಲಿ ಭಾರತದ ಇತಿಹಾಸ – ರಾಣಿ ಅಬ್ಬಕ್ಕಳ ಕೊಡುಗೆ ಗೋಷ್ಟಿಯಲ್ಲಿ ಡಾ. ತುಕಾರಾಮ್ ಪೂಜಾರಿ ಉಪನ್ಯಾಸ ನೀಡಲಿದ್ದಾರೆ. ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್‌ ಇವರಿಂದ ವೀರ ರಾಣಿ ಅಬ್ಬಕ್ಕ ಕಥಾ ಕೀರ್ತನೆಯೂ ನಡೆಯಲಿದೆ.

ಸಮಾರೋಪ ಸಮಾರಂಭವು ಡಾ. ಕೆ ಎಂ ಕೃಷ್ಣ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗುಂಟ ಲಕ್ಷ್ಮಣ ಸಮರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕೋಟ ಶ್ರೀನಿವಾಸ ಪೂಜಾರಿ, ಅಮರ್ ಕೋಟೆ, ಶ್ರೀಪತಿ ಕಲ್ಲೂರಾಯ, ಮುರಳಿಕೃಷ್ಣ ಕೆ ಎನ್, ಪ್ರೊ. ಶಿವಪೂಜಿ ಕೋಟಿ, ಪ್ರೊ. ರೋಹಿಣಿ ಕುಮಾರ್ ಹಿಲ್ಲಿ, ಡಾ ಸಿ ವಿ ಮರಿದೇವರಮಠ ಪಾಲ್ಗೊಳ್ಳಲಿದ್ದಾರೆ.

ಈ ಕಾರ್ಯಕ್ರಮದಲ್ಲಿ 21 ಮಹಿಳಾ ಸಾಧಕರಿಗೆ ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರ ಪ್ರದಾನ ನಡೆಯಲಿದೆ. ಸುರೇಖಾ ಶೆಟ್ಟಿ (ಮಹಿಳಾ ಸಬಲೀಕರಣ), ಸುಂದರಿ ನಲಿಕೆ ಪೆರುವಾಯಿ (ದೈವಾರಾಧನೆ), ಡಾ. ಆಶಾಜ್ಯೋತಿ ರೈ (ಸಮಾಜಸೇವೆ – ಸಂಘಟನೆ), ವನಜಾ ಪೂಜಾರ್ತಿ ಬೀಡಿನಗುಡ್ಡೆ (ರುದ್ರಭೂಮಿ ಸೇವೆ), ಡಾ ಗ್ರೀಷ್ಮಾ ವಿವೇಕ್ ಆಳ್ವ (ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ಥ್ಯ), ಗೀತಾ ಲಕ್ಷ್ಮೀಶ್ (ಬಾಲ ಸಂಸ್ಕಾರ – ಸಂಘಟನೆ), ವಿದುಷಿ ಸುಮಂಗಲ ರತ್ನಾಕರ್ ರಾವ್ (ಭಾರತೀಯ ಕಲೆಗಳು), ಕೆ ಬಿ ಅಮ್ಮಣ್ಣಿ (ನಾಟಿವೈದ್ಯೆ), ಪೂರ್ಣಿಮಾ ಯತೀಶ್ ರೈ (ಯಕ್ಷಗಾನ), ಮಹಾಲಕ್ಷ್ಮೀ ದಾರಂದಕುಕ್ಕು (ಉದ್ಯಮಶೀಲತೆ), ಸಿ ಎಸ್ ರಾಧಿಕಾ (ಆಂಬುಲೆನ್ಸ್ ಚಾಲನೆ), ಯಶೋಧಾ ಕೇಶವ್ ಉಡುಪಿ (ತುಳು ಸಾಹಿತ್ಯ ಸಂಘಟನೆ), ಸಂಧ್ಯಾ ಮೂಡಬಿದ್ರೆ (ಪರಿಸರ), ಶುಭಾಶಯ ಜೈನ್ (ಯಕ್ಷಗಾನ ಪ್ರಸಂಗ ಸಾಹಿತ್ಯ), ಕು. ಶ್ರಾವ್ಯ ಯು (ಉದಯೋನ್ಮುಖ ಕಲಾವಿದೆ), ಭವ್ಯರಾಣಿ ಪಿ ಸಿ (ಸಮುದಾಯ ಅಭಿವೃದ್ಧಿ), ರೂಪಲೇಖಾ (ಆಯುರ್ವೇದ), ಶಾಲಿನಿ ಆತ್ಮಭೂಷಣ್ ಪುತ್ತೂರು (ಭರತನಾಟ್ಯ), ಶುಭಾ ಅಡಿಗ ಪುತ್ತೂರು (ತಾಳಮದ್ದಳೆ), ಕು. ಶಹನಾ ಮುಮ್ತಾಜ್ ನೆಲ್ಯಡ್ಕ (ಪತ್ರಿಕೋದ್ಯಮ), ಕೆ ಎನ್ ದೀಪಿಕಾ (ಯೋಗ ಮತ್ತು ಧ್ಯಾನ) ಇವರುಗಳು ಗೌರವ ಸನ್ಮಾನವನ್ನು ಪಡೆಯಲಿದ್ದಾರೆ. ಈ 100 ನೇ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದು ಇನ್ನಷ್ಟು ಇಂತಹ ಒಳ್ಳೆಯ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಲಿ ಎಂಬುವುದು ನಮ್ಮಯ ಆಶಯ.

✍️ ಗೀತಾ ಲಕ್ಷ್ಮೀಶ್

SHARE
Loading spinner

Leave a Reply

Your email address will not be published. Required fields are marked *

error: Content is protected !!